PLEASE LOGIN TO KANNADANET.COM FOR REGULAR NEWS-UPDATES

ಸತ್ಯ ಸೂರ್ಯನಿಗಿಂತಲೂ ಪ್ರಖರ ತಡೆಯಲಾರದವರು ಕುದಿಯುತ್ತಾರೆ–

ಸಿದ್ದು ಯಾಪಲಪರವಿ

ಗದಗ ;ಸ್ವಜನ ಪಕ್ಷಪಾತಿಗಳು, ಮೂಲಭೂತವಾದಿಗಳು ಸತ್ಯವನ್ನು ಸಹಿಸುವುದಿಲ್ಲ ಎಂಬುದನ್ನು 10-3-2010 ರಂದು ಶಿವಯೋಗ ಮಂದಿರದಲ್ಲಿ ನಡೆದ ಘಟನೆಯಿಂದ ಸಾಬೀತಾಗಿದೆ. ಗದುಗಿನ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಕಾರಿನ ಮೇಲೆ ಕಲ್ಲು ಎಸೆದು, ಏಕವಚನದಲ್ಲಿ ನಿಂದಿಸಿದ ಮಹನೀಯರಿಗೆ ಸತ್ಯವನ್ನು ಜೀರ್ಣಿಸಿಕೊಳ್ಳಲಾಗಿಲ್ಲ.

ಕೋಟ್ಯಾಂತರ ಹಣ ಖರ್ಚು ಮಾಡಿ ಶಿವಯೋಗ ಮಂದಿರದಲ್ಲಿ ಹಾನಗಲ್ ಕುಮಾರಸ್ವಾಮಿಗಳವರ ಶತಮಾನೋತ್ಸವ ಸಮಾರಂಭವನ್ನು ಆಯೋಜಿಸಲಾಗಿದೆ. ಅದ್ಧೂರಿತನ ಕೇವಲ ಭೌತಿಕವಾಗಿದೆ ಎಂಬುದನ್ನು ಎಲ್ಲರೂ ಸಾಬೀತುಪಡಿಸಿದ್ದಾರೆ. ಇಪ್ಪತ್ತೈದು ಸಾವಿರ ಕುರ್ಚಿಗಳಿರುವ ಪೆಂಡಾಲಿನಲ್ಲಿ ಕೇವಲ ಸಾವಿರ ಜನ ಇದ್ದರೆ ಹೇಗಾಗಬೇಡ. ಲಕ್ಷಾಂತರ ಲಿಂಗಾಯತರನ್ನು ಹೊಂದಿದ ಸಮಾಜ, ಶತಮಾನಗಳ ಇತಿಹಾಸವಿರುವ ಸಂಘಟನೆಗಳು ಆಯೋಜಿಸುವ ಸಂಭ್ರಮದಲ್ಲಿ ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಪಾಲ್ಗೊಳ್ಳುತ್ತಾರೆ ಎಂದರೆ ಏನರ್ಥ? ಹಾಗಾದರೆ ದೋಷವೆಲ್ಲಿದೆ? ಎಂಬುದನ್ನು ಮಠಾಧೀಶರು ಪರಾಮರ್ಶಿಸದಿದ್ದರೆ, ಇನ್ಯಾರು ಆ ಕೆಲಸ ಮಾಡಬೇಕು?

ಅಂದು ಆಗಿದ್ದು ಅದೇ ತಮ್ಮ ಭಾಷಣದಲ್ಲಿ ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಶಿವಯೋಗಮಂದಿರದ ಪೀಠಾಧಿಪತಿಗಳಾದ ಬಳ್ಳಾರಿ-ಹೊಸಪೇಟೆಯ ಜಗದ್ಗುರು ಸಂಗನಬಸವ ಸ್ವಾಮಿಗಳು ಹಾಗೂ ವೀರಶೈವ ಮಹಾಸಭಾದ ಅಧ್ಯಕ್ಷ ಶ್ರೀ ಭೀಮಣ್ಣಖಂಡ್ರೆ ಅವರು ತಮ್ಮ ಸ್ಥಾನ ತ್ಯಜಿಸಿ ಹೊಸಬರಿಗೆ ಅವಕಾಶ ನೀಡಲಿ ಎಂದು ನೇರವಾಗಿ ಹೇಳಿದ್ದು ಸದರಿ ಅಧ್ಯಕ್ಷರುಗಳ ಪಿತ್ತ ನೆತ್ತಿಗೇರಿಸಿದೆ.

ಈಗ ಲಿಂಗಾಯತ ಧರ್ಮವು ಜಡವಾಗಿದೆ. ಸ್ಥಾವರವಾಗಿದೆ. ಬಸವಣ್ಣನಿಂದ ಆರಂಭಗೊಂಡ ಧರ್ಮ ಕೆಲವರ ತಪ್ಪು ಇತಿಹಾಸದಿಂದ ಪುರಾತನ ಧರ್ಮ ಎಂಬ ಭ್ರಮೆ ಹುಟ್ಟಿಸಿದೆ. ಲಿಂಗಾಯತ್ ಧರ್ಮದ so called ಮೇಲ್ವರ್ಗದ ಪುರೋಹಿತಶಾಹಿಗಳು ಬಸವಣ್ಣನನ್ನು ಧರ್ಮಗುರು ಎಂದು ಒಪ್ಪುತ್ತಿಲ್ಲ. ಅದ್ಯಾರು ಕಾಲ್ಪನಿಕ ವ್ಯಕ್ತಿ ಗುರು ಎಂಬ ಗುರಾವಣೆ ಶುರು ಆಗಿದೆ.

ಈ ಚರ್ಚೆಯ ಅಂತಿಮ ಹಂತಕ್ಕೆ ನಾವೀಗ ತಲುಪಿದ್ದೇವೆ. ಗುರು-ವಿರಕ್ತರ ಮಧ್ಯ ಬೆಸೆಯಲಾಗದ ಬಿರುಕು ಬಿಟ್ಟಿದೆ. ಗುರುಪರಂಪರೆಯ ಮಠಾಧೀಶರು ಬಸವಣ್ಣನನ್ನು ಧರ್ಮ ಗುರು ಎಂದು ಒಪ್ಪುತ್ತಿಲ್ಲ, ಕೆಲ ವಿರಕ್ತ ಪರಂಪರೆಯ ಮಠಾಧೀಶರು ಬಹಿರಂಗವಾಗಿ ಬಸವಣ್ಣ ಅಂದರೂ, ಆಂತರಿಕವಾಗಿ ಜಾತಿಜಂಗಮ ಮೇಲರಿಮೆಯಿಂದ ಮುಕ್ತರಾಗಿಲ್ಲ. ಗುರುಗಳಿಗೂ-ವಿರಕ್ತರಿಗೂ ಬಸವಣ್ಣ ಬೇಡವಾದರೆ ಸಮಾಜದ ವಿಕಸನ ಹೇಗೆ ಸಾಧ್ಯ?

ಲಿಂಗಾಯತ ಧರ್ಮಕ್ಕೆ ಜಾಗತಿಕ ಮನ್ನಣೆ ಸಿಕ್ಕಿರುವುದು ಬಸವಾದಿ ಶರಣ ತತ್ವಗಳಿಂದ. ಅವರು ರಚಿಸಿದ ವಚನ ಶಾಸ್ತ್ರ ಲಿಂಗಾಯತರ ಧರ್ಮಗ್ರಂಥ. ಬಸವ ಧರ್ಮದ ಜಾತ್ಯಾತೀತ ನಿಲುವನ್ನು ಮಾನಸಿಕವಾಗಿ ಸ್ವೀಕರಿಸದ ಜಾತಿವಾದಿಗಳಿಗೆ ಬಸವಣ್ಣನೆಂದರೆ ಅಷ್ಟಕ್ಕಷ್ಟೇ.

ಹಾನಗಲ್ ಕುಮಾರಸ್ವಾಮಿಗಳು, ಪಂಚಾಕ್ಷರ ಗವಾಯಿಗಳು ಹಾಗೂ ಡಾ. ಪಂಡಿತ ಪುಟ್ಟಾರಾಜ ಗವಾಯಿಗಳವರಿಗೆ ಇರುವ ತತ್ವ ನಿಷ್ಠೆ ಈಗಿನ ಮಠಾಧೀಶರಿಗಿಲ್ಲ. ಆದರೆ ಹಾನಗಲ್ ಕುಮಾರಸ್ವಾಮಿಗಳ ಹೆಸರಿನಲ್ಲಿ ಜಾತಿ ಸಂಘಟನೆಯಂತಹ ಸಣ್ಣ ಕಾರ್ಯಕ್ಕೆ ತೊಡಗಿದ್ದು ವಿಷಾದನೀಯ. ಒಳ್ಳೆಯದಿದ್ದರೆ ಮಾತ್ರ ಜನ ಸ್ವಿಕರಿಸುತ್ತಾರೆ, ಇಲ್ಲದಿದ್ದರೆ ಇಲ್ಲ ಎಂಬುದಕ್ಕೆ ಶಿವಯೋಗಮಂದಿರದ poor performance ಸಾಕ್ಷಿಯಾಗಿದೆ.

ಈ ಹಿಪೋಕ್ರಸಿ ಈಗ ಬಯಲಾಗಹತ್ತಿದೆ. ಕೇವಲ ಇಳಕಲ್ಲ, ಚಿತ್ರದುರ್ಗ ಹಾಗೂ ಗದುಗಿನ ಜಗದ್ಗುರುಗಳು ತಮ್ಮ ಕೆಲವು ಮಠಾಧೀಶರೊಂದಿಗೆ ಬಸವ ನಿಷ್ಠೆಯ ಅನುಷ್ಠಾನಕ್ಕಾಗಿ ಶ್ರಮಿಸುತ್ತಿರುವುದು ವೀರಶೈವ ಮೂಲಭೂತವಾದಿಗಳನ್ನು ಕೆಣಕಿದ. ಜನ ಬಸವ ಧರ್ಮವನ್ನು ಸಮರ್ಪಕವಾಗಿ ಅರಿತುಕೊಂಡರೆ ಪುರೋಹಿತ ವ್ಯವಸ್ಥೆಗೆ ಪೆಟ್ಟು ಬೀಳುತ್ತದೆ. ಪುರೋಹಿತ ವ್ಯವಸ್ಥೆಗೆ ಪೆಟ್ಟು ಬಿದ್ದರೆ ಜಾತಿ ಜಂಗಮ ಮಠಾಧೀಶರ ದೌಲತ್ತು ಕುಗ್ಗುತ್ತದೆ. ಜನ ಪ್ರಜ್ಞಾವಂತರಾದರೆ, ಲಿಂಗಾಯತ ಧರ್ಮವನ್ನು ಅರಿತುಕೊಂಡು, ಲಿಂಗಾಯತ ಒಳ ಪಂಗಡ ಸಮಾಜದವರು ಸ್ವಾಮಿಗಳಾದರೆ ಜಾತಿ ಜಂಗಮರನ್ನು ಮೆರೆಸುವವರು ಯಾರು? ಎಂಬ ಧಾವಂತ. ಜಾತಿಯಿಂದ ಜಂಗಮರಾದರೂ ವೀರಕ್ತ ಪೀಠಪರಂಪರೆಯ ಜವಾಬ್ದಾರಿ ಹೊತ್ತುಕೊಂಡಿರುವ ಗದಗ, ಇಳಕಲ್ಲ ಹಾಗೂ ಚಿತ್ರದುರ್ಗ ಶ್ರೀಗಳು ಮತ್ತಷ್ಟು ಒಗ್ಗಟ್ಟಾಗಿ ಬಸವ ತತ್ವ ಪ್ರಚಾರಕ್ಕಾಗಿ ಬದ್ಧರಾಗಬೇಕಾದ ಕಾಲ ಈಗ ಕೂಡಿಬಂದಿದೆ.

ನೈತಿಕವಾಗಿ ಈಗ ಇಳಕಲ್ ಶ್ರೀಗಳು ಹೆಚ್ಚು ಬಲಶಾಲಿಗಳಾಗಲು ಕಾರಣ ತಮ್ಮ ಉತ್ತರಾಧಿಕಾರಿಗಳನ್ನಾಗಿ ಜಂಗಮೇತರರನ್ನು ಅಯ್ದುಕೊಂಡು ಕಷ್ಟ ಕಾರ್ಪಣ್ಯಗಳನ್ನು ಎದುರಿಸಿದ್ದಕ್ಕೆ ಎಂಬುದನ್ನು ಎಲ್ಲರೂ ಅರಿತಿದ್ದಾರೆ.

ಅದೇ ಪರಂಪರೆಯನ್ನು ಭದ್ರ ಪಡಿಸಲು ಈಗ ಚಿತ್ರದುರ್ಗ ಹಾಗೂ ಗದುಗಿನ ಶ್ರೀಗಳು ಮುಂದಾಗಿ ಬಸವ ತತ್ವ ನಿಷ್ಠರ ನೈತಿಕ ಸ್ಥ್ಯರ್ಯ ಹೆಚ್ಚಿಸಬೆಕು.

ಬಸವ ತತ್ವದಲ್ಲಿ ನಂಬಿಕೆ ಇರದವರನ್ನು ವೀರಶೈವರೆಂದು, ಇದ್ದವರನ್ನು ಲಿಂಗಾಯತರೆಂದು ಪರಿಗಣಿಸಬೇಕು. ಅನಗತ್ಯ ವೀರಶೈವ ಧರ್ಮಿಯರನ್ನು ಕೆಣಕುವ ಅಗತ್ಯವಿಲ್ಲ. ಖಡಾ ತುಂಡಾಗಿ ತಾತ್ವಿಕ ಹಿನ್ನಲೆಯಲ್ಲಿ ವಿಭಜಿತರಾದಾಗ ಈ ಗೊಂದಲವೇ ಇರುವುದಿಲ್ಲ. ಈ ಹಿಂದೆ ಇಳಕಲ್ಲ ಶ್ರೀಗಳ ಮೇಲೆ ಕಲ್ಲು ಎಸೆಯಲು ಯತ್ನಿಸಿದವರೇ ಇಂದು ಈ ಕೃತ್ಯವನ್ನು ಮಾಡಿದ್ದಾರೆ. ಸತ್ಯ ಒರೆಗೆ ಹಚ್ಚಬೇಕಾದರೆ ಈ ರೀತಿಯ ಸಂಘರ್ಷ ಅನಿವಾರ್ಯ. ಬಸವ ತತ್ವ ತರಬೇತಿಗಾಗಿ ಇನ್ನೊಂದು ವಿಶ್ವವಿದ್ಯಾಲಯ ಪ್ರಾರಂಭಿಸಿ positive ವಿಚಾರದ ದೊಡ್ಡಗೆರೆ ಎಳೆಯಬೇಕೇ ಹೊರತು ಈ ರೀತಿ ಸಾರ್ವಜನಿಕ ಸಂಘರ್ಷಕ್ಕೆ ಮುಂದಾಗಬಾರದು. ಲಿಂಗಾಯತ ಧರ್ಮದ ಸಾರವನ್ನು ಪ್ರಚುರ ಪಡಿಸಿ, ಜನಸಾಮಾನ್ಯರಲ್ಲಿರುವ ಗೊಂದಲ ನಿವಾರಿಸಬೇಕು. ಈ ಹಿನ್ನಲೆಯಲ್ಲಿ ಜಾತಿ ಜಂಗಮದ ಹಿನ್ನಲೆಯಲ್ಲಿ ಬಂದ ವಿರಕ್ತ ಮಠಾಧೀಶರು ಇನ್ನೂ ಹೆಚ್ಚು ಗಟ್ಟಿಯಾಗಬೇಕು. ಶಿವಯೋಗ ಮಂದಿರದ ಸದರಿ ಪ್ರಕರಣ ಇಂತಹ ಮನ್ವಂತರಕ್ಕೆ ನಾಂದಿ ಹಾಡಿ ಶುಭಸೂಚನೆ ನೀಡಿದೆ. ಪ್ರಗತಿಪರರೆಲ್ಲ ಒಗ್ಗಟ್ಟಾಗಿ ಬಸವಧರ್ಮ ಬೆಂಬಲಿಸಿ ತೋಂಟದ ಶ್ರೀಗಳ ಮೌಲ್ಯವನ್ನು ಇಮ್ಮಡಿಗೊಳಿಸಬೇಕು.

ಲಿಂಗಾಯತ್ ತಾಲಿಬಾನಿಗಳಿಗೆ ಕೆಲವು ಪ್ರಶ್ನೆಗಳು- ಲಿಂಗಣ್ಣ ಸತ್ಯಂಪೇಟೆ, ಶಹಾಪುರ

ಶಹಾಪುರ, ಏ. 20 : ಲಿಂಗಾಯತ ಸಮುದಾಯದ ಎರಡು ಬೃಹತ್ ಸಂಸ್ಥೆಗಳಾದ ಅಖಿಲ ಭಾರತ ವೀರಶೈವ ಮಹಾಸಭೆ ಮತ್ತು ಶಿವಯೋಗ ಮಂದಿರಗಳು ಜಂಟಿಯಾಗಿ ಆಚರಿಸಿದ ಶತಮಾನೋತ್ಸವ ಸಮಾರಂಭದಲ್ಲಿ ಗದುಗಿನ ತೋಂಟದಾರ್ಯಮಠದ ಸಿದ್ಧಲಿಂಗಸ್ವಾಮಿಗಳ ಅವರ ಕಾರಿಗೆ ಕಲ್ಲು ತೂರಿದ ಘಟನೆ, ಅತ್ಯಂತ ಅಮಾನವೀಯ ಹಾಗೂ ಖಂಡನೀಯ.


ಏಕೆಂದರೆ, ಸದರಿ ಸಂಸ್ಥೆಗಳೆರಡು ಸೇರಿ ಆಚರಿಸಿದ ಶತಮಾನೋತ್ಸವ ಸಮಾರಂಭಕ್ಕೆಂದು ಸಭೆಗೆ ಆಗಮಿಸಿದ ಶ್ರೋತೃಗಳು ಕೇವಲ ಮುನ್ನೂರು ಮಾತ್ರ! ಆದರೆ ಹಾಕಿದ ಪೆಂಡಾಲಿಗೆ ಕೊಟ್ಟ ಹಣ 50 ಲಕ್ಷ. ಮಾಡಲಾದ ಆಸನ ವ್ಯವಸ್ಥೆ 40 ರಿಂದ 50 ಸಾವಿರವಂತೆ, ಮುಖ್ಯ ವಕ್ತಾರರಾಗಿ ಹೋಗಿದ್ದ ತೋಂಟದಾರ್ಯರಿಗೂ ಇಷ್ಟೊಂದು ದೊಡ್ಡ ಪೆಂಡಾಲು. 40-50 ಸಾವಿರ ಖುರ್ಚಿಗಳು! ಸಭೆಯಲ್ಲಿ ಸೇರಿದ್ದ ಜನ ಕೇವಲ ಮನ್ನೂರು ನಾನೂರು!! ಇದು ಯಾವ ಪುರುಷಾರ್ಥಕ್ಕೆ? ಅಂತ ಅವರಿಗೂ ಅನ್ನಿಸಿದ್ದರೆ ಅದರಲ್ಲಿ ಅಂಥ ತಪ್ಪೇನಿದೆ? ಈ ಮಾತನ್ನೆ ಅವರು ಅಂದಿನ ಸಭೆಯಲ್ಲಿ ಆಡಿದ್ದರೆ ಅದರಲ್ಲಿ ಯಾವ ಅನೌಚಿತ್ಯವಿದೆ?

ಸಾಲದ್ದಕ್ಕೆ ನೂರು ವರ್ಷಗತಿಸಿದ್ದರು ಈ ಸಂಸ್ಥೆಗಳು ಮಾಡಿದ ಕಮಾಯಿ ಏನು ? ಕೊನೆಯ ಪಕ್ಷ ಲಿಂಗಾಯತರ ಒಳ ಪಂಗಡಗಳನ್ನು ತೆಗೆದು ಹಾಕಿ, ಇಡೀ ಲಿಂಗಾಯತ ಸಮುದಾಯ ಒಂದು ಎಂಬುದನ್ನಾದರೂ ಮಾಡಿ ತೋರಿಸಿದವೆ ? ಈ ಎರಡು ಸಂಸ್ಥೆಗಳು ಸೇರಿ, ಲಿಂಗಾಯತ ಒಳಪಂಗಡಕ್ಕೆ ಸೇರಿದ ಎರಡು ಬೇರೆ ಬೇರೆ ಕುಟುಂಬಗಳ ನೆಂಟಸ್ತಿಕೆ ಮೂಡಿಸಿದ ಒಂದೇ ಒಂದು ಉದಾಹರಣೆಯಾದರೂ ಈ ನೂರು ವರ್ಷಗಳ ಅವಧಿಯಲ್ಲಿ ಇದೆಯೆ ?

ಈ ಸಂಸ್ಥೆಗಳೆರಡು ಕೂಡಿ ಒಂದೇ ಒಂದು ಶಿಕ್ಷಣ ಸಂಸ್ಥೆ ಅಥವಾ ಒಂದೇ ಒಂದು ಹಾಸ್ಟೆಲ್, ಆಸ್ಪತ್ರೆ , ಒಂದೇ ಒಂದು ಔದ್ಯೋಗಿಕ ಸಂಸ್ಥೆ ಇದಾವುದೂ ಬೇಡ, ವ್ಯವಹಾರದ ದೃಷ್ಟಿಯಿಂದಲಾದರೂ ಒಂದು ಬ್ಯಾಂಕು ಇತ್ಯಾದಿಯನ್ನು ಸ್ಥಾಪಿಸಿವೆಯೆ ? ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಜನ ಪೈಗಳಿದ್ದಾರೆ. ಆದರೆ ರಾಜ್ಯದ ತುಂಬ ಅವರ ಬ್ಯಾಂಕುಗಳಿವೆ. ವೈಶ್ಯ ಜನಾಂಗ ಇರುವುದು ಒಂದು ಹಿಡಿಯಷ್ಟು. ಆದರೆ ಪ್ರತಿ ಜಿಲ್ಲೆಯಲ್ಲೂ ಎರಡು ಮೂರು ವೈಶ್ಯಬ್ಯಾಂಕುಗಳಿವೆ. ಈ ಸಂಸ್ಥೆಗಳ ಒಂದು ಹಣಕಾಸು ಸಂಸ್ಥೆ ಕೂಡ ಇಲ್ಲವಲ್ಲ ಯಾಕೆ ? ವೀರಶೈವ ಮಹಾಸಭೆಯ ಸ್ಥಾಪನೆಯ ಮುಖ್ಯ ಉದ್ದೇಶವೇನಾಗಿದೆಯೆಂದರೆ ಅದರ ಪ್ರಾಣಾಳಿಕೆಯೇ ಹೇಳುವಂತೆ ಇವ ನಮ್ಮವ, ಇವ ನಮ್ಮವ ಎಂದು ಎಲ್ಲರನ್ನೂ ಅಪ್ಪಿಕೊಂಡು ವೀರಶೈವ ಧರ್ಮವನ್ನು ವಿಶ್ವಧರ್ಮವನ್ನಾಗಿ ಮಾಡುವುದಾಗಿದೆ. ಈ ಉದ್ದೇಶ ಈಗ ಈಡೇರಿದೆಯೆ ? ಕನಿಷ್ಟ ಇದು ಈಗ ಒಂದು ಊರಿನ, ಒಂದು ಓಣಿಯ ಧರ್ಮವಾಗಿಯಾದರೂ ಉಳಿದಿದೆಯೆ ?

ಅದರಂತೆ ಶಿವಯೋಗ ಮಂದಿರ ಸ್ಥಾಪನೆಯ ಮುಖ್ಯ ಪ್ರಣಾಳಿಕೆ ಏನು ಹೇಳುತ್ತದೆಂದರೆ ಈ ಧರ್ಮದ ಮುಖ್ಯ ತತ್ವಗಳಾದ, ಅಷ್ಟಾವರಣ, ಪಂಚಾಚಾರ, ಷಟ್ ಸ್ಥಲಗಳನ್ನು ಹೇಳಿಕೊಡುವುದರ ಜೊತೆಗೆ ಮನುಷ್ಯ ಸಮಾನತೆ, ಲಿಂಗ ಸಮಾನತೆ, ಜಾತಿ ವಿನಾಶ ಮುಂತಾದ ಆಧುನಿಕ ಜೀವನ ಮೌಲ್ಯಗಳನ್ನು ಪ್ರಚುರಪಡಿಸಲು ಅಗತ್ಯವಾದ ನೂರು ಸಾವಿರ ಸಂಖ್ಯೆಯ ವಟುಗಳನ್ನು ಸಿದ್ಧಗೊಳಿಸುವುದು.

ಈ ಉದ್ದೇಶದಲ್ಲಿ ಕೂದಲೆಳೆಯಷ್ಟಾದರೂ ಸಾಧನೆ ಆಗಿದೆಯೆ ? ಶಿವಯೋಗ ಮಂದಿರದ ನೂರು ವರ್ಷಗಳ ಇತಿಹಾಸದಲ್ಲಿ ಅಯ್ಯನೋರ ಕುಲದಲ್ಲಿ ಹುಟ್ಟಿದವರನ್ನು ಮಾತ್ರ ತೆಗೆದುಕೊಂಡು, ಒಳಪಂಗಡಕ್ಕೆ ಸೇರಿದ ಬಣಜಿಗ, ಪಂಚಮಸಾಲಿ, ಸಾದರ, ನೊಣಬ, ಕುಂಬಾರ, ಹಡಪದ, ಕಂಬಾರ, ಗಾಣಿಗ, ಸಜ್ಜನ ಮುಂತಾದವರನ್ನು ಯಾಕೆ ಸೇರಿಸಿಕೊಂಡಿಲ್ಲ ? ಹೇಳುವುದು ಆಚಾರ. ತಿನ್ನೋದು ಬದನೆಕಾಯಿ ಎಂಬಂತೆ ನಡೆದುಕೊಂಡು ಬಂದ ಈ ಮುದಿ ಸಂಸ್ಥೆಗಳಿಗೆ ಅಂಟಿಕೊಂಡ ಮುದಿ ಹದ್ದುಗಳು ಯುವಕರಿಗಾಗಿ ಜಾಗ ಖಾಲಿ ಮಾಡಬೇಕು - ಎಂದು ತೋಂಟದಾರ್ಯರು ಅಂದು ಪ್ರಶ್ನಿಸಿದ್ದರೆ ಅದರಲ್ಲಿ ಅಸತ್ಯವೇನಿದೆ ?

ಶಿವಯೋಗ ಮಂದಿರವನ್ನೇನು, ಹಾನಗಲ್ ಕುಮಾರ ಸ್ವಾಮಿಗಳೊಬ್ಬರೆ ಸ್ಥಾಪನೆ ಮಾಡಿದರೆ ? ಅದರ ನಿಜವಾದ ಮೂದಲಿಗರೆಂದರೆ ಅರಟಾಳು ರುದ್ರಗೌಡರು, ಲಿಂಗರಾಜ ದೇಸಾಯರು, ಗಿಲಗಂಚಿ ಗುರುಸಿದ್ಧಪ್ಪನವರು. ಒಂಟಿ ಮುರಿ ಲಕಮನಗೌಡರು. ವಾರದ ಮಲ್ಲಪ್ಪನವರು, ಮಾತ್ರವಲ್ಲ, ಇವರೆಲ್ಲರಿಗಿಂತ ಮೊಟ್ಟ ಮೊದಲು ಈ ದಿಸೆಯಲ್ಲಿ ಯೋಚನೆ ಮಾಡಿದ್ದು ಚೆನ್ನಪ್ಪಗೌಡ ಕೊಂಗವಾಡರು.

ಇವರು ಧಾರವಾಡದ ಯಾವುದೋ ಒಂದು ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ಬೆಂಗಳೂರಿನ ಪುಟ್ಟಣ್ಣ ಶೆಟ್ಟಿ ಮುಂತಾದವರು, ತಮ್ಮ ಇಡೀ ಆಸ್ತಿಯನ್ನೇ ಲಿಂಗಾಯತ ಸಮುದಾಯಕ್ಕೆ ಧಾರೆ ಎರೆದ ಮಹನೀಯರು. ಈ ಮಹನೀಯರೆಲ್ಲ ಸೇರಿ ತಮ್ಮ ಜೊತೆಗೆ ಒಬ್ಬ ಸ್ವಾಮಿಗಳಿರಲಿ ಎಂದು ಹಾನಗಲ್ ಕುಮಾರ ಸ್ವಾಮಿಗಳನ್ನು ಜೊತೆಗೂಡಿಸಿಕೊಂಡರೆ ಈ ಸ್ವಾಮಿಗಳು ಆಗ ಅದಕ್ಕೆಲ್ಲ ಕೊಟ್ಟದ್ದೆಷ್ಟು ? ಕೇವಲ ನೂರು ರೂಪಾಯಿ!

ಇದು ಹೇಗಾದರಿರಲಿ, ಅಖಿಲ ಭಾರತ ವೀರಶೈವ ಮಹಾಸಭೆ ಮತ್ತು ಶಿವಯೋಗ ಮಂದಿರಗಳೆರಡಕ್ಕೆ ನೂರು ತುಂಬಿದ ವೇಳೆಯಲ್ಲಿ ಕೇವಲ ಹಾನಗಲ್ ಕುಮಾರಸ್ವಾಮಿಗಳೊಬ್ಬರೇ ಈಗ ನೆನಪಾಗಿ ಉಳಿದವರೆಲ್ಲ ಮರವೆಗೆ ಉಪೇಕ್ಷೆಗೆ ಒಳಗಾಗಿದ್ದಾರಲ್ಲ ಯಾಕೆ ? ಶಿವಯೋಗ ಮಂದಿರವೇನು ಕೇವಲ ಜಂಗಮ ಜಾತಿಯವರಿಗೇ ಸೇರಿದ್ದೇನು? ಇದನ್ನು ತೋಂಟದಾರ್ಯ ಜಗದ್ಗುರುಗಳೊಬ್ಬರೇ ಅಲ್ಲ, ನಾಡಿನ ಸಮಸ್ತರೆಲ್ಲ ಕೇಳುತ್ತೇವೆ ಮತ್ತು ಅವರ ಕಾರಿನ ಮೇಲೆ ಕಲ್ಲು ಎಸೆದ ಲಿಂಗಾಯತ ತಾಲಿಬಾನ್ ಗಳನ್ನು ಸರಕಾರ ದಸ್ತಗಿರಿ ಮಾಡಬೇಕು

ಕೃಪೆ: ದಟ್ಸ್ ಕನ್ನಡ

Advertisement

0 comments:

Post a Comment

 
Top