PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಮಾ. ೦೪ (ಕ ವಾ) ಹೈದ್ರಾಬಾದ್ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ, ಇಲ್ಲಿನ ಕಲೆ, ಸಂಸ್ಕೃತಿ, ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳು, ಇಲ್ಲಿನ ಪ್ರತಿಭೆಗಳು, ಸಾಧಕರು ಮುಂತಾದ ಸಂಗತಿಗಳನ್ನು ಪರಿಚಯಿಸುವ ಈಶಾನ್ಯದ ಐಸಿರಿ ಸರಣಿಯ ೨೫ ನೇ ಬೆಳ್ಳಿ ಹಬ್ಬದ ಸಂಚಿಕೆ ಮಾ. ೦೬ ರಂದು ಬೆಳಿಗ್ಗೆ ೧೦ ಗಂಟೆಗೆ ಹೊಸಪೇಟೆ, ರಾಯಚೂರು ಹಾಗೂ ಕಲಬುರಗಿ ಆಕಾಶವಾಣಿ ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರವಾಗಲಿದೆ.
        ಹೈ.ಕ.ಪ್ರದೇಶ ಅಭಿವೃದ್ಧಿ ಮಂಡಳಿ ಈ ಸಂಪೂರ್ಣ ಸರಣಿಯನ್ನು ಪ್ರಾಯೋಜಿಸಿದ್ದು, ೨೫ನೇ ಬೆಳ್ಳಿ ಹಬ್ಬದ ಸಂಚಿಕೆಯಲ್ಲಿ ಮೂಡಿ ಬರಲಿರುವ ಕಾರ್ಯಕ್ರಮದ ವಿವರಗಳು ಹೀಗಿವೆ.  ಕಲಬುರಗಿಯ ನಿವೃತ್ತ ನ್ಯಾಯ ಮೂರ್ತಿಗಳಾಗಿರುವ ಎಂ.ಬಿ. ಬಿರಾದರ ಅವರಿಂದ ಎರಡನೆಯ ಶನಿವಾರ ಹಾಗೂ ಇತರ ಸರ್ಕಾರಿ ರಜೆಗಳ ಕುರಿತು ಒಂದು ಜಿಜ್ಞಾಸೆ.  ಕಲಬುರಗಿ ತಾ. ಕಮಲಾಪುರದ ಸರ್ಕಾರಿ ಕನ್ಯಾ ಪ್ರೌಢ ಶಾಲೆಯಲ್ಲಿ ಸಹ ಶಿಕ್ಷಕರಾಗಿರುವ ಸೋಮಶೇಖರ ಹಿರೇಮಠ ಅವರಿಂದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯದ ಕುರಿತು ಸಲಹೆ ಸೂಚನೆಗಳು.  ಅಫಜಲಪುರದ ಸರ್ಕಾರಿ ಪ್ರಥಮ ಶ್ರೇಣಿ ಕಾಲೇಜಿನಲ್ಲಿ ಮನಶ್ಯಾಸ್ತ್ರದ ಪ್ರಾಧ್ಯಾಪಕರಾಗಿರುವ ಡಾ. ಆರ್. ವೆಂಕಟರಡ್ಡಿ ಅವರಿಂದ ಪರೀಕ್ಷೆಗಳ ಬಗ್ಗೆ ಮಾನಸಿಕ ಸಿದ್ಧತೆ ಕುರಿತು ಮಾರ್ಗದರ್ಶನ.  ಕೊಪ್ಪಳದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಸಾಹಿತಿ ಎಚ್.ಎಸ್. ಪಾಟೀಲ ಅವರ ಸಾಧನೆಯ ಪರಿಚಯ.  ಕಲಬುರಗಿ ತಾ. ಶ್ರೀನಿವಾಸ ಸರಡಗಿ ಜೈ ಭವಾನಿ ಮಹಿಳಾ ಸ್ವ ಸಹಾಯ ಸಂಘದ ಸದಸ್ಯೆಯರ ಯಶೋಗಾಥೆ.  ಊರು-ಟೂರಿನಲ್ಲಿ ಕೊಪ್ಪಳ ತಾಲೂಕಿನ ಕೆಲವು ಪ್ರೇಕ್ಷಣೀಯ ಸ್ಥಳಗಳ ದರ್ಶನ.  ಕಲಬುರಗಿ ಕಲಾವಿದ ಮಹೇಶ ಬಡಿಗೇರ ಅವರಿಂದ ಹಾಡು.   ಇವುಗಳಲ್ಲದೆ ಕಳೆದ ವಾರದಲ್ಲಿ ಈ ಭಾಗದ ಆರು ಜಿಲ್ಲೆಗಳಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್‍ಯಕ್ರಮಗಳು, ಘಟಿಸಿದ ಪ್ರಮುಖ ಸಂಗತಿಗಳನ್ನು ಒಳಗೊಂಡ 'ವಾರದ ವರದಿ', ಮಹಾತ್ಮರ, ಗಣ್ಯರ ನುಡಿಮುತ್ತುಗಳು, ನಗೆ ಹನಿ, ಸಾಮಾಜಿಕ ವಿಷಯಗಳ ಕುರಿತು ಜಿಂಗಲ್‌ಗಳು ಮೂಡಿ ಬರಲಿವೆ.   ಸರಣಿಯ ನಿರೂಪಣಾ ಸಾಹಿತ್ಯ ಹಾಗೂ ನಿರ್ಮಾಣದ ಜವಾಬ್ದಾರಿಯನ್ನು ಸೋಮಶೇಖರ ಎಸ್. ರುಳಿಯವರು ವಹಿಸಿಕೊಂಡಿದ್ದಾರೆ ಎಂದು ಕಲಬುರಗಿ ಆಕಾಶವಾಣಿ ಕೇಂದ್ರದ ಮುಖ್ಯಸ್ಥೆ ಅಂಜನಾ ಯಾತನೂರ ತಿಳಿಸಿದ್ದಾರೆ.
ಪರಿಶಿಷ್ಟರ ಶ್ರೇಯಸ್ಸಿಗೆ ಶ್ರಮಿಸಿದವರಿಗೆ ಪ್ರಶಸ್ತಿ ಅರ್ಜಿ ಆಹ್ವಾನ.
ಕೊಪ್ಪಳ ಮಾ. ೦೪ (ಕ ವಾ) ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಶ್ರೇಯಸ್ಸಿಗಾಗಿ ಶ್ರಮಿಸಿರುವವರಿಗೆ ೨೦೧೬-೧೭ ನೇ ಸಾಲಿನಲ್ಲಿ ಆಚರಿಸಲಾಗುವ ಡಾ. ಬಾಬು ಜಗಜೀವನರಾಂ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ನೀಡಲು ಉದ್ದೇಶಿಸಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
     ೨೦೧೬-೧೭ ನೇ ಸಾಲಿನಲ್ಲಿ ಏಪ್ರಿಲ್ ೦೫ ರಂದು ಡಾ. ಬಾಬು ಜಗಜೀವನರಾಂ ರವರ ೧೦೯ ನೇ ಜಯಂತಿ ಹಾಗೂ ಏ. ೧೪ ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ೧೨೫ ನೇ ಜಯಂತಿ ಆಚರಣೆಯನ್ನು ರಾಜ್ಯ ಮಟ್ಟದಲ್ಲಿ ಸರ್ಕಾರದ ವತಿಯಿಂದ ಆಚರಿಸಲಾಗುತ್ತದೆ.  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಜನಾಂಗದವರ ಶ್ರೇಯಸ್ಸಿಗಾಗಿ ಪ್ರೋತ್ಸಾಹಿಸಿ, ಶ್ರಮಿಸಿ, ಗಣನೀಯ ಸೇವೆ ಸಲ್ಲಿಸಿದ ಅರ್ಹ ವ್ಯಕ್ತಿಗಳನ್ನು ಗುರುತಿಸಿ, ಅಂತಹವರಿಗೆ ಡಾ. ಬಾಬು ಜಗಜೀವನರಾಂ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಗಳನ್ನು ನೀಡಿ ಗೌರವಿಸಲು ಸರ್ಕಾರ ಉದ್ದೇಶಿಸಿದೆ.  ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ಅರ್ಹರಿರುವ ಗಣ್ಯ ವ್ಯಕ್ತಿಗಳು, ತಮ್ಮ ಸಾಧನೆ, ಘಟನೆ, ವ್ಯಕ್ತಿ ವಿಶ್ಲೇಷಣೆ ಇತ್ಯಾದಿ ವಿವರಗಳುಳ್ಳ ದಾಖಲೆ ಸಹಿತದ ವಿವರವನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ, ತಮ್ಮ ಇತ್ತೀಚಿನ ಎರಡು ಭಾವಚಿತ್ರಗಳೊಂದಿಗೆ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ ಅವರಿಗೆ ಸಲ್ಲಿಸಬೇಕು.  ನಿಗದಿತ ಅರ್ಜಿ ನಮೂನೆಯನ್ನು ಕಚೇರಿಯಿಂದ ಉಚಿತವಾಗಿ ಪಡೆಯಬಹುದು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ. ಕಲ್ಲೇಶ್ ಅವರು ತಿಳಿಸಿದ್ದಾರೆ.

Advertisement

0 comments:

Post a Comment

 
Top