PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಮಾ. ೦೩ (ಕ ವಾ) ಬೇಸಿಗೆಯಲ್ಲಿ ಬೆಳೆಯಲಾಗುವ ಬೆಳೆಗಳಿಗೆ ತಗಲುವ ಕೀಟಬಾಧೆ ಹಾಗೂ ಬೆಳೆಗಳ ಸಂರಕ್ಷಣಾ ಕ್ರಮಗಳ ಕುರಿತು ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ರೈತರಿಗೆ ಸಲಹೆಗಳನ್ನು ನೀಡಿದೆ.
            ಕೊಪ್ಪಳ ಜಿಲ್ಲೆಯಲ್ಲಿ ಬೇಸಿಗೆಯ ಭತ್ತ, ಶೇಂಗಾ, ಈರುಳ್ಳಿ, ಟೊಮ್ಯಾಟೋ, ಮೆಣಸಿನಕಾಯಿ ಮತ್ತು ಗೋವಿನಜೋಳ ಇವು ಈಗಿನ ಬೆಳೆಗಳಾಗಿದ್ದು ಇವುಗಳಿಗೆ ಕಾಡುವ ಪ್ರಮುಖ ಕೀಟಗಳೆಂದರೆ ಶೇಂಗಾದಲ್ಲಿ ಬಾಧಿಸುವ ಸುರುಳಿ ಪೂಚಿ, ಸ್ಪೋಡಾಪ್ಟೆರ (ರಬ್ಬರ್ ಹುಳು) ಮತ್ತು ರಸಹೀರುವ ಕೀಟಗಳ ಬಾಧೆ, ಅಲ್ಲದೆ ಈರುಳ್ಳಿ ಬೆಳೆಗೆ ಥ್ರಿಪ್ಸ್ ನುಸಿಗಳು ಬಾಧಿಸುತ್ತವೆ. ಟೊಮ್ಯಾಟೊ ಮತ್ತು ಮೆಣಸಿನಕಾಯಿಯಲ್ಲಿ ಹಣ್ಣು ಕಾಯಿಕೊರಕ, ರಸ ಹೀರುವ ಕೀಟಗಳು ಮತ್ತು ಸೂಜಿಹುಳು (ಪಿನ್ ವರ್ಮ)ಗಳು ಕಂಡುಬರುತ್ತವೆ. ಭತ್ತದಲ್ಲಿ ಕಾಂಡ ಕೊರೆಯುವ ಹುಳು, ಎಲೆ ಸುರುಳಿಹುಳು, ತೆನೆ ತಿಗಣೆ ಕೀಟಗಳು ಬಾಧಿಸುತ್ತವೆ. ಗೋವಿನ ಜೋಳದಲ್ಲಿ ಕಾಂಡಕೊರಕದ ಬಾಧೆ ಕಾಣಿಸಿಕೊಳ್ಳತ್ತವೆ.
ನಿರ್ವಹಣಾ ಕ್ರಮಗಳು : ಭತ್ತದಲ್ಲಿ ಕಾಂಡ ಕೊರೆಯುವ ಹುಳದ ಬಾಧೆ ಹೆಚ್ಚಾಗಿರುವ ಪ್ರದೇಶದಲ್ಲಿ ಹೆಕ್ಟೇರಿಗೆ ೨೫ ಕಿ. ಗ್ರಾಂ ಪಿಪ್ರೊನಿಲ್ ೦.೩ ಜಿ ಹರಳುಗಳನ್ನು ಅಥವಾ ೧೯ ಕಿ.ಗ್ರಾಂ ಶೇ. ೩ ರ ಕಾರ್ಬೊಫ್ಯುರಾನ್ ೨೦ ಇ.ಸಿ ಹರಳನ್ನು ಬಿತ್ತನೆಗೆ ಮುಂಚೆ ಮಣ್ಣಿನಲ್ಲಿ ಬೆರೆಸಿ ನೀರನ್ನು ಹಾಯಿಸಿ ಅಥವಾ ೨ ಮಿ.ಲೀ ಕ್ಲೋರ್‌ಪೈರಿಫಾಸ್‌ನ್ನು  ಒಂದು ಲೀಟರ್ ನೀರಿನಲ್ಲಿ ಸೇರಿಸಿ ಸಿಂಪಡಿಸಬೇಕು. ಎಲೆ ಸುರಳಿ ಹುಳು, ಕೊಳವೆ ಹುಳು ಹಾಗೂ ಮಿಡತೆ ಇವುಗಳ ಹತೋಟಿಗೆ ಬಿತ್ತನೆಯಾದ ೧೦-೧೨ ದಿವಸಗಳ ನಂತರ ೧.೩ ಮಿ.ಲೀ ಮೊನೊಕ್ರೊಟೋಫಾಸ್ ೩೬ ಎಸ್.ಎಲ್. ಅಥವಾ ೨ ಮಿ.ಲೀ ಕ್ಲೋರ್‌ಪೈರಿಫಾಸ್ ೨೦ ಇ.ಸಿ ಅಥವಾ ೨ ಮಿ.ಲೀ ಫೋಸಲೋನ್ ೩೫ ಇ.ಸಿ ಅಥವಾ ೨.೦ ಮಿ. ಲೀ ಕ್ವಿನಾಲ್‌ಫಾಸ್ ೨೫ ಇ.ಸಿ ಒಂದು ಲೀ. ನೀರಿನಲ್ಲಿ ಬೆರೆಸಿ ಬೆಳೆಗೆ ಸಿಂಪಡಿಸಬೇಕು.  ತೆನೆ ತಿಗಣೆಯ ಬಾಧೆ ಕಂಡುಬಂದಲ್ಲಿ ಹೆಕ್ಟೇರಿಗೆ ೨೦ ಕಿ.ಗ್ರಾಂ ಶೇ. ೫ ರ ಮೆಲಾಥಿಯಾನ್ ಪುಡಿ ತೆನೆಗಳ ಮೇಲೆ ಉದುರಿಸಬೇಕು ಅಥವಾ ೨ ಮಿ.ಲೀ. ಮೆಲಾಥಿಯಾನ್ ೫೦ ಇ.ಸಿ ೧ ಲೀ. ನೀರಿನಲ್ಲಿ ಬೆರೆಸಿ ತೆನೆಗಳ ಮೇಲೆ ಸಿಂಪಡಿಸಬೇಕು. ಹೆಕ್ಟೇರಿಗೆ ೬೭೫ ಲೀಟರ್ ಸಿಂಪರಣಾ ದ್ರಾವಣ ಬೇಕಾಗುತ್ತದೆ.  ಶೇಂಗಾದಲ್ಲಿ ಸುರುಳಿ ಪೂಚಿ ಹಾಗೂ ರಸ ಹೀರುವ ಕೀಟದ ನಿರ್ವಹಣೆಗಾಗಿ ೨ ಮಿ.ಲೀ ಪ್ರೋಪೆನೋಫಾಸ್ ೫೦ ಇ.ಸಿ, ೨ ಮಿ.ಲೀ ಡೈಮೆಥೋಯೇಟ್ ೩೦ ಇ.ಸಿ ಅಥವಾ ಮೋನೊಕ್ರೋಟೋಫಾಸ್ ೩೬ ಎಸ್.ಎಲ್ ಅಥವಾ ೦.೩ ಮಿ.ಲೀ ಇಮಿಡಾಕ್ಲೋಪ್ರಿಡ್ ೧೭.೮ ಎಸ್.ಎಲ್  ಅಥವಾ ೨ ಮಿ.ಲೀ ಕ್ವಿನಾಲ್‌ಫಾಸ್ ೨೫ ಇ.ಸಿ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ರಸ ಹೀರುವ ಕೀಟಗಳು ಕಂಡುಬಂದಾಗ ಶೇ. ೫ರ ಬೇವಿನ ಬೀಜದ ಕಷಾಯನ್ನು ಸಿಂಪಡಿಸಬೇಕು.   ಸ್ಪೋಡೋಪ್ಟೆರಾ ಕೀಡೆಗಾಗಿ ಎನ್.ಪಿ.ವಿ ೨೫೦ ಎಲ್.ಇ ಪ್ರತೀ ಹೆಕ್ಟೇರಿಗೆ ಬಳಸಬೇಕು (೦.೭೫ ಮಿ.ಲೀ ಪ್ರತೀ ಲೀ. ನೀರಿಗೆ). ಪ್ರತೀ ಎಕರೆಗೆ ೪ ಕಿ. ಗ್ರಾಂ ಬೆಲ್ಲ ೨೫೦ ಮಿ.ಲೀ ಮೊನೋಕ್ರೋಟೊಫಾಸ್ ೩೬ ಎಸ್ ಎಲ್ ೫-೮ ಲೀಟರ್ ನೀರು ಹಾಗೂ ೫೦ ಕಿ. ಗ್ರಾಂ ಅಕ್ಕಿ ಅಥವಾ ಗೋದಿ ತೌಡಿನೊಂದಿಗೆ ಬೆರೆಸಿ. ನಂತರ ೪೮ ಗಂಟೆಗಳ ಕಾಲ ಗೋಣಿ ಚೀಲಗಳಲ್ಲಿ ಕಳಿಯಲು ಇಡಬೇಕು. ತಯಾರಿಸಿದ ವಿಷ ಪಾಷಾಣವನ್ನು ಸಾಲುಗಳಲ್ಲಿ ಎರಚಬೇಕು.  ಈರುಳ್ಳಿಯಲ್ಲಿ ಥ್ರಿಪ್ಸ್ ನುಸಿಯನ್ನು ತಡೆಗಟ್ಟಲು ಬಿತ್ತಿದ ೩ ವಾರಗಳ ನಂತರ ಬೆಳೆಗೆ ಇಮಿಡಾಕ್ಲೋಪ್ರಿಡ್ ೧೭.೮ ಎಸ್.ಎಲ್ ಅಥವಾ ೨ ಮಿ.ಲೀ ಡೈಮೆಥೋಯೇಟ್ ೩೦ ಇ.ಸಿ ೦.೫ ಮಿ.ಲೀ ಫಾಸ್ಪಮಿಡಾನ್ ೮೫ ಡಬ್ಲ್ಯೂ ಎಸ್.ಸಿ ಅಥವಾ ೧.೫ ಮಿ.ಲೀ ಆಕ್ಸಿಡೆಮಟಾನ್ ಮಿಥೈಲ್  ಪ್ರತೀ ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.  ಟೊಮ್ಯಾಟೋ ಮತ್ತು ಮೆಣಸಿನಕಾಯಿಯ ಕೀಟಗಳನ್ನು ನಿಯಂತ್ರಿಸಲು ಹೊಲದ ಸುತ್ತಮುತ್ತ ಕಳೆ ಕಸ ಇರದಂತೆ ಕಿತ್ತು ನಾಶಪಡಿಸಬೇಕು. ಪ್ರತೀ ೨೫ ಸಾಲು ಟೊಮ್ಯಾಟೊ ನಂತರ ೧ ಸಾಲು ಚೆಂಡು ಹೂ ಬೆಳೆಯಬೇಕು. ನಾಟಿ ಮಾಡುವ ಪೂರ್ವದಲ್ಲಿ ಅಂಟು ಬಲೆಗಳನ್ನು ಹೊಲದಲ್ಲಿ ಅಳವಡಿಸಬೇಕು.  ಟುಟ ಅಬ್ಸಲೂಟ ಮೋಹಕ ಬಲೆಗಳನ್ನು ಎಕರೆಗೆ ೧೦ ರಂತೆ ಅಳವಡಿಸಿ ಲ್ಯೂರ್‌ಗಳನ್ನು ಪ್ರತೀ ೨೦ ದಿನಗಳಿಗೊಮ್ಮೆ ಬದಲಾಯಿಸಬೇಕು.  ಗೋವಿನ ಜೋಳದಲ್ಲಿ ಕಾಂಡಕೊರೆಯುವ ಹುಳುಗಳು ಕಂಡುಬಂದರೆ ಪ್ರತೀ ಹೆಕ್ಟೇರಿಗೆ ೭.೫ ಕಿ. ಗ್ರಾಂ ನಂತೆ ಕಾರ್ಬೋಫ್ಯುರಾನ್ ಶೇ. ೩ ರ ಹರಳನ್ನು ಸುಳಿಯಲ್ಲಿ ಹಾಕಬೇಕು. ಕೀಟದ ಬಾಧೆ ಪುನ:ಕಂಡು ಬಂದರೆ ಸುಳಿಯಲ್ಲಿ ಮತ್ತೊಮ್ಮೆ ಇದೇ  ಕ್ರಮ ಅನುಸರಿಸಬೇಕು.
     ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಷಯತಜ್ಞರಾದ ರೋಹಿತ್ ಕೆ.ಎ (೯೮೪೫೧೯೪೩೨೮) ಅವರನ್ನು ಸಂಪರ್ಕಿಸಬೇಕೆಂದು ವಿಸ್ತರಣಾ ಮುಂದಾಳು ಡಾ. ಎಂ.ಬಿ ಪಾಟೀಲ (೯೪೮೦೬೯೬೩೧೯)  ತಿಳಿಸಿದ್ದಾರೆ.

Advertisement

0 comments:

Post a Comment

 
Top