ನಿಶ್ಚಿತಾರ್ಥಕ್ಕೆ ಹೋದವರು, ಬಾರದ ಲೋಕ ಸೇರಿದರು
ಅವರು ಅಂದುಕೊಂಡಂತೆ ಆಗಿದ್ರೆ ಸುಖವಾಗಿ ಮನೆ ತಲುಪಬಹುದಿತ್ತು. ಆದ್ರೆ ವಿಧಿ ಅನ್ನೋದು ಬಿಡಬೇಕಲ್ಲ. ಟ್ಯಾಂಕರ್ ಚಾಲಕನ ರೂಪದಲ್ಲಿ ಬಂದ ಜವರಾಯ ಚಾಲಕ ಸೇರಿದಂತೆ ಒಂದೇ ಕುಟುಂಬದ ಮೂವರನ್ನು ಬಲಿತೆಗೆದುಕೊಂಡಿದ್ದಾನೆ. ಹೀಗಾಗಿ ನಿಶ್ಚಿತಾರ್ಥಕ್ಕೆ ಅಂತ ತೆರಳಿದವ್ರು ಇದೀಗ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.
ಇವರು ಬಳ್ಳಾರಿ ಜಿಲ್ಲೆಯ ಹೊಸಪೇಟೆಯವರು. ಹೊಸಪೇಟೆಯ ಠಾಣೆಯಲ್ಲಿ ಪೇದೆಯಾಗಿರೋ ಗಣೇಶ ಹಾಗೂ ಗಾದಿಗನೂರು ಠಾಣೆ ವ್ಯಾಪ್ತಿಯಲ್ಲಿ ಪೇದೆಯಾಗಿರುವ ಶೇಖರ್ ಇಬ್ಬರೂ ಸಹೋದರರು. ಇವ್ರು ಕುಟುಂಬ ಸಮೇತರಾಗಿ ಹೊಸಪೇಟೆಯಿಂದ ಹುಬ್ಬಳ್ಳಿಗೆ ಇವ್ರ ಅಣ್ಣನ ಮಗನ ನಿಶ್ಚಿತಾರ್ಥಕ್ಕೆ ಅಂತ ತೆರಳಿದ್ರು. ನಿಶ್ಚಿತಾರ್ಥ ಮುಗಿಸಿ ಹುಬ್ಬಳ್ಳಿಯಿಂದ ಬೋಲೆರೋದಲ್ಲಿ ರಾತ್ರಿ ವಾಪಸ್ ಬರೋವಾಗ ಕೊಪ್ಪಳದ ಹೊರವಲಯದಲ್ಲಿರುವ ಕೋಳೂರು ಕ್ರಾಸ್ ನಲ್ಲಿ ಟ್ಯಾಂಕರ್ ರೂಪದಲ್ಲಿ ಬಂದ ಜವರಾಯ ಬೋಲೆರೋದಲ್ಲಿದ್ದ ಚಾಲಕ ಸೇರಿದಂತೆ ಪೇದೆ ೪೫ ವರುಷದ ಗಣೇಶ್ ಅವರ ಪತ್ನಿ೩೬ ವರುಷದ ಅಮುದಾ ಹಾಗೂ ಅತ್ತೆ ೬೦ ವರುಷದ ಗೋವಿಂದಮ್ಮರನ್ನು ಬಲಿತೆಗೆದುಕೊಂಡಿದ್ದಾನೆ. ಅಪಘಾತದಲ್ಲಿ ಪೇದೆ ಶೇಖರ್ ಗಾಯಗೊಂಡಿದ್ದಾರೆ. ಟ್ಯಾಂಕರ್ನ ಚಾಲಕ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದ್ದಾನೆ. ಒಮ್ಮಿಂದೊಮ್ಮೆಲೆ ಬೋಲೆರೋ ವಾಹನದತ್ತ ವಾಹನ ಚಲಾಯಿಸಿದಾಗ ಎರಡು ವಾಹನಗಳ ಮಧ್ಯೆ ಢಿಕ್ಕಿ ಸಂಭವಿಸಿದೆ. ಆಗ ಬೋಲೆರೋ ಪಲ್ಟಿ ಹೊಡೆದಿದ್ದು ಅದರಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಓರ್ವ ಗಾಯಗೊಂಡಿದ್ದಾನೆ. ಛಿದ್ರಛಿದ್ರವಾಗಿದ್ದ ಬೋಲೆರೋದಲ್ಲಿದ್ದವರ ದೇಹದ ಅಂಗಗಳು ಘಟನೆಯ ಭೀಕರತೆಗೆ ಸಾಕ್ಷಿಯಾಗಿದ್ದವು. ಟ್ಯಾಂಕರ್ ಒಮ್ಮಿಂದೊಮ್ಮೆಲೆ ನಮ್ಮ ಮೇಲೆ ಬಂದು ಬಿಡ್ತು ಅಂತಾರೆ ಶೇಖರ್.
ಟ್ಯಾಂಕರ್ ಚಾಲಕನ ಅಜಾಗರೂಕತೆ ಹಾಗೂ ಅತಿಯಾದ ಮಧ್ಯ ಸೇವನೆಯೇ ದುರ್ಘಟನೆಗೆ ಕಾರಣ ಎನ್ನಲಾಗಿದೆ. ಪ್ರಕರಣ ಹಿನ್ನೆಲೆಯಲ್ಲಿ ಟ್ಯಾಂಕರ್ ಚಾಲಕ ಚಂದ್ರಪ್ಪನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಟ್ಯಾಂಕರ್ ಚಾಲಕನ ನಿರ್ಲಕ್ಷ್ಯದಿಂದಾಗಿ ನಿಶ್ಚಿತಾರ್ಥಕ್ಕೆ ತೆರಳಿದವರು ಬಾರದ ಲೋಕಕ್ಕೆ ಹೋಗಿದ್ದಾರೆ. ಶವಗಳನ್ನು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಜಿಲ್ಲಾಸ್ಪತ್ರೆಯ ಆವರಣದಲ್ಲಿ ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.
0 comments:
Post a Comment