ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ವಿಕಲಚೇತನರ ರಿಯಾಯಿತಿ ದರದ ಬಸ್ಪಾಸ್ ದರವನ್ನು ಪರಿಷ್ಕರಿಸಿದ್ದು, ವಾರ್ಷಿಕ ರೂ.೫೫೦ ರಿಂದ ರೂ.೬೬೦ ಕ್ಕೆ ಆಗಸ್ಟ್ ೦೨ ರಿಂದ ಜಾರಿಗೆ ಬರುವಂತೆ ಪರಿಷ್ಕರಣೆ ಮಾಡಲಾಗಿದೆ ಎಂದು ಕೊಪ್ಪಳ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ನಿರ್ದೇಶನದಂತೆ ಈ ಮೊದಲು ವಿಕಲಚೇತನರ ರಿಯಾಯತಿ ದರದ ಬಸ್ ಪಾಸ್ಗಳ ವಿತರಣೆಯ ಸಂಖ್ಯೆಯನ್ನು ಮಿತಿಗೊಳಿಸಿ, ನಿಗದಿಪಡಿಸಲಾಗುತ್ತಿತ್ತು. ಆದರೆ ಇದೀಗ ಸರ್ಕಾರದ ನೂತನ ಆದೇಶದಂತೆ ವಿಕಲಚೇತನರಿಗೆ ವಿತರಿಸುತ್ತಿದ್ದ ರಿಯಾಯತಿ ಬಸ್ ಪಾಸ್ ಸಂಖ್ಯೆಯ ಗರಿಷ್ಠ ಮಿತಿಯನ್ನು ತೆಗೆದುಹಾಕಲಾಗಿದ್ದು, ಬಸ್ ಪಾಸ್ ಕೋರಿ ಅರ್ಜಿ ಸಲ್ಲಿಸುವ ಎಲ್ಲಾ ಅರ್ಹ ವಿಕಲಚೇತನ ಫಲಾನುಭವಿಗಳಿಗೂ ಬಸ್ ಪಾಸ್ ವಿತರಿಸಲಾಗುವುದು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಗುರುತಿಸಿ ಶಿಫಾರಸ್ಸು ಮಾಡುವ ಎಲ್ಲಾ ವಿಕಲಚೇತನ ಫಲಾನುಭವಿಗಳಿಗೂ ರಿಯಾಯಿತಿ ದರದ ಬಸ್ ಪಾಸ್ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ವಿಕಲಚೇತನರ ಹಳೆಯ ರಿಯಾಯಿತಿ ದರದ ಬಸ್ ಪಾಸ್ಗಳನ್ನು ನಿಗದಿತ ದಿನಾಂಕವರೆಗೆ ನವೀಕರಿಸಿ ಕೊಡಲಾಗಿದೆ ಎಂದು ಈ.ಕ.ರ.ಸಾ.ಸಂಸ್ಥೆಯ ಕೊಪ್ಪಳ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪಿ. ಮಿನುಲ್ಲಾ ಸಾಹೇಬ್ ತಿಳಿಸಿದ್ದಾರೆ.
0 comments:
Post a Comment