PLEASE LOGIN TO KANNADANET.COM FOR REGULAR NEWS-UPDATES


 ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಕ್ಷೇತ್ರಗಳ ಮತ ಎಣಿಕೆ ಪ್ರಕ್ರಿಯೆ ನಡೆಯುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾ ವಿದ್ಯಾಲಯಕ್ಕೆ ಚುನಾವಣಾ ವೀಕ್ಷಕರು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
  ಕೊಪ್ಪಳ ಜಿಲ್ಲಾ ವ್ಯಾಪ್ತಿಯ ಕುಷ್ಟಗಿ, ಗಂಗಾವತಿ, ಕನಕಗಿರಿ, ಯಲಬುರ್ಗಾ ಮತ್ತು ಕೊಪ್ಪಳ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಗರದ ಶ್ರೀ ಗವಿಸಿದ್ದೇಶ್ವರ ಮಹಾ ವಿದ್ಯಾಲಯ ಕಟ್ಟಡದಲ್ಲಿ ನಡೆಯಲಿದ್ದು, ಕಟ್ಟಡದಲ್ಲಿನ ಸ್ಥಿತಿ-ಗತಿ, ಸೌಲಭ್ಯಗಳ ಬಗ್ಗೆ ಚುನಾವಣಾ ವೀಕ್ಷಕರು ಪರಿಶೀಲನೆ ನಡೆಸಿದರು.  ಕಾಲೇಜು ಕಟ್ಟಡ ಮತ ಎಣಿಕೆ ಕೇಂದ್ರಕ್ಕೆ ಸೂಕ್ತವಾಗಿದ್ದು, ಸಾರ್ವಜನಿಕರು, ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ಗವಿಮಠ ಆವರಣದಲ್ಲಿನ ವಿಶಾಲವಾದ ಮೈದಾನವನ್ನು ಕಂಡು ತೃಪ್ತಿ ವ್ಯಕ್ತಪಡಿಸಿದರು.  ಕಾಲೇಜು ಕಟ್ಟಡದಲ್ಲಿ ನೆಲಮಹಡಿ ಮತ್ತು ಮೊದಲನೆ ಮಹಡಿಯಲ್ಲಿ ಮತಗಳ ಎಣಿಕಾ ಕೇಂದ್ರ, ಮತಯಂತ್ರಗಳ ದಾಸ್ತಾನು ಕೊಠಡಿಗೆ ಇರುವ ಅಚ್ಚುಕಟ್ಟು ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಚುನಾವಣಾ ವೀಕ್ಷಕರಿಗೆ ವಿವರಣೆ ನೀಡಿದರು.
  ಗಂಗಾವತಿ ವಿಧಾನಸಭಾ ಕ್ಷೇತ್ರದ ಚುನಾವಣಾ ವೀಕ್ಷಕ ಪ್ರಭಾತ್ ಶಂಕರ್, ಚುನಾವಣಾ ಪೊಲೀಸ್ ವೀಕ್ಷಕ ಎ. ಪಾರಿ, ಕೊಪ್ಪಳ ವಿಧಾನಸಭಾ ಚುನಾವಣಾ ವೀಕ್ಷಕಿ ನೀಲಂಗುಪ್ತಾ, ಕನಕಗಿರಿ ಕ್ಷೇತ್ರದ ಚುನಾವಣಾ ವೀಕ್ಷಕ ವಿ.ವಿ. ಶಾಜಿಮೋನ್, ಕುಷ್ಟಗಿ ಕ್ಷೇತ್ರ ಚುನಾವಣಾ ವೀಕ್ಷಕ ಎ.ಎಸ್.ಕೆ. ಸಿನ್ಹಾ, ಯಲಬುರ್ಗಾ ಕ್ಷೇತ್ರ ಚುನಾವಣಾ ವೀಕ್ಷಕ ಭರತ್‌ಲಾಲ್ ರಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ, ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

0 comments:

Post a Comment

 
Top