PLEASE LOGIN TO KANNADANET.COM FOR REGULAR NEWS-UPDATES


  ಕೊಪ್ಪಳ ತಾಲೂಕಿನ ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅಭಿವೃದ್ಧಿಗಾಗಿ ಸರ್ಕಾರ ಕಾಲೇಜು ಶಿಕ್ಷಣ ಇಲಾಖೆ ಮೂಲಕ ೨. ೫ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ತಿಳಿಸಿದ್ದಾರೆ.
  ಕೊಪ್ಪಳ ತಾಲೂಕಿನ ಹೊಸಬಂಡಿಹರ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೆಚ್ಚುವರಿಯಾಗಿ ೫ ಕೊಠಡಿಗಳ ನಿರ್ಮಾಣ, ಪ್ರಯೋಗಾಲಯ ಅಭಿವೃದ್ಧಿಗಾಗಿ ೭೫ ಲಕ್ಷ ರೂ., ಕೊಪ್ಪಳದ ಪ್ರಥಮ ದರ್ಜೆ ಕಾಲೇಜಿಗೆ ೭ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ೧ ಕೋಟಿ ರೂ., ಹಿಟ್ನಾಳದ ಪ್ರಥಮ ದರ್ಜೆ ಕಾಲೇಜಿಗೆ ೨ ಹೆಚ್ಚುವರಿ ಕೊಠಡಿ ನಿರ್ಮಾಣ, ಪ್ರಯೋಗಾಲಯ ಅಭಿವೃದ್ಧಿಗಾಗಿ ೩೦ ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.  ಅಲ್ಲದೆ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಜ್ಞಾನ ವಿಷಯಗಳ ಬೋಧನೆಗೆ ಪೂರಕವಾಗುವಂತೆ ವಿಜ್ಞಾನ ಪ್ರಯೋಗಾಲಯ ಅಭಿವೃದ್ಧಿಗಾಗಿ ಪ್ರತ್ಯೇಕವಾಗಿ ೪೫ ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿದೆ ಎಂದು ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ತಿಳಿಸಿದ್ದಾರೆ.

ಮಳೆ ಹಾನಿ ಪ್ರದೇಶಕ್ಕೆ ಶಾಸಕ ಸಂಗಣ್ಣ ಕರಡಿ ಭೇಟಿ
ಕೊಪ್ಪಳ ಅ. ೧೧ (ಕ.ವಾ): ಕೊಪ್ಪಳ ತಾಲೂಕಿನ ಬಂಡಿಹರ್ಲಾಪುರದ ಕೆಳಹಂತದ ಸೇತುವೆಯು ಭಾರಿ ಮಳೆಯ ಕಾರಣಕ್ಕೆ ಒಡೆದು ಭತ್ತದ ಗದ್ದೆಗೆ ನೀರು ನುಗ್ಗಿ ಬೆಳೆ ಹಾನಿಯಾದ ಪ್ರದೇಶಕ್ಕೆ ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಇತ್ತೀಚೆಗೆ ಭೇಟಿ ನೀಡಿ, ನಷ್ಟ ಅನುಭವಿಸಿದ ರೈತರಿಗೆ ಸಾಂತ್ವನ ಹೇಳಿದರು.
  ಕೆಳಹಂತದ ಸೇತುವೆ ಒಡೆದು ಹೋಗಿರುವ ಕುರಿತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ, ಸೇತುವೆಯ ದುರಸ್ತಿಗಾಗಿ ಕೂಡಲೆ ಅಂದಾಜು ಪತ್ರ ತಯಾರಿಸಿ ಸಲ್ಲಿಸಲು ಸೂಚನೆ ನೀಡಿದರು.  ಬೆಳೆ ಹಾನಿ ಕುರಿತಂತೆ ಸಮೀಕ್ಷೆ ಕೈಗೊಂಡು, ರೈತರಿಗೆ ಪರಿಹಾರ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಹಾಯಕ ಕೃಷಿ ನಿರ್ದೇಶಕರಾದ ಸಿ. ಮಂಜುಳಾ ಅವರಿಗೆ ಶಾಸಕ ಸಂಗಣ್ಣ ಕರಡಿ ಅವರು ಈ ಸಂದರ್ಭದಲ್ಲಿ ಸೂಚನೆ ನೀಡಿದರು.

Advertisement

0 comments:

Post a Comment

 
Top