PLEASE LOGIN TO KANNADANET.COM FOR REGULAR NEWS-UPDATES


ಸಚಿವ ಮುರುಗೇಶ್ ನಿರಾಣಿ ಸ್ಪಷ್ಟನೆ
 ಕೊಪ್ಪಳ ಜಿಲ್ಲೆಯೂ ಸೇರಿದಂತೆ ರಾಜ್ಯದ ಬರಗಾಲದ ಬವಣೆ ಹಾಗೂ ಗ್ರಾಮೀಣ ಪ್ರದೇಶಗಳ ಸ್ಥಿತಿಗತಿ ಕುರಿತು ಸಂಪೂರ್ಣ ಅರಿವಿದೆ. ನಾನೂ ಸಹ ರೈತ ಕುಟುಂಬದಿಂದ ಬಂದವನು, ಗ್ರಾಮೀಣ ಪ್ರದೇಶದಲ್ಲಿ ಬೆಳೆದವನು.  ಜು. ೨೧ ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಜನರು ಗುಳೇ ಹೋಗುವುದನ್ನು ತಡೆಯಲು, ಗೋಶಾಲೆ ಪ್ರಾರಂಭಿಸುವುದು, ಉದ್ಯೋಗಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ಹೇಳಲಾಗಿದೆಯೇ ಹೊರತು, ಗುಳೇ ಹೋಗುವುದು ಜಿಲ್ಲೆಯ ಜನಕ್ಕೆ ಚಟವಾಗಿದೆ ಎಂದು ಯಾವುದೇ ಪ್ರಸ್ತಾಪ ಮಾಡಿಲ್ಲ.  ಆದರೆ ನನ್ನ ಹೇಳಿಕೆಯನ್ನು ತಿರುಚಿ, ಪ್ರಕಟಿಸಿರುವುದು, ಅನಗತ್ಯ ಗೊಂದಲಕ್ಕೆ ಕಾರಣವಾಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಸ್ಪಷ್ಟನೆ ನೀಡಿದ್ದಾರೆ.
       ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವನಾಗಿ ಜಿಲ್ಲೆಗೆ ಜು. ೨೧ ರಂದು ಪ್ರಥಮ ಭೇಟಿ ನೀಡಿ, ಜಿಲ್ಲೆಯ ಬರಗಾಲ ಸ್ಥಿತಿಗತಿ ಹಾಗೂ ಕೈಗೊಂಡ ಎಲ್ಲಾ ಕಾಮಗಾರಿಗಳ ಕುರಿತು ಸಮಗ್ರ ಪರಿಶೀಲನೆ ಹಾಗೂ ಸಮಾಲೋಚನೆಯನ್ನು  ನಡೆಸಲಾಗಿದೆ.  ಬರಗಾಲದ ಹಿನ್ನೆಲೆಯಲ್ಲಿ ಕೈಗೊಂಡ  ಕಾಮಗಾರಿಗಳ ಪ್ರಗತಿಯು ತೃಪ್ತಿದಾಯಕವಾಗಿದ್ದು, ಇನ್ನೂ ಹೆಚ್ಚಿನ ಕಾಳಜಿ ವಹಿಸಿ ಕಾಮಗಾರಿಗಳನ್ನು ಸಮರ್ಥವಾಗಿ ನಿರ್ವಹಿಸಲು ಅಗತ್ಯ ಸೂಚನೆಗಳನ್ನು ನೀಡಲಾಗಿದೆ.  ಕೊಪ್ಪಳ ಜಿಲ್ಲೆಯ ಜನತೆಗೆ ಗುಳೆ ಹೋಗುವುದು ಚಟವಾಗಿದೆ ಎಂದು ನಾನು ಎಲ್ಲಿಯೂ ಪ್ರಸ್ತಾಪಿಸಿಲ್ಲ.  ಜನತೆಗೆ ಅಗತ್ಯ ಉದ್ಯೋಗ, ಕುಡಿಯುವ ನೀರು, ಗೋಶಾಲೆಗಳನ್ನು ಸಮರ್ಪಕವಾಗಿ ಆರಂಭಿಸಲಾಗಿದೆ. ಉದ್ಯೋಗಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಶ್ರಮಿಸಲಾಗುತ್ತಿದೆ.  ಅವುಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂಬ ಸದುದ್ದೇಶದಿಂದ ನಾನು ಹೇಳಿಕೆ ನೀಡಿದ್ದೇನೆಯೇ ಹೊರತು, ಯಾರನ್ನೂ ಅವಮಾನಿಸುವ ಉದ್ದೇಶ ನನ್ನದಲ್ಲ. ರೈತರ ಹಾಗೂ ಕಾರ್ಮಿಕರ ಕುರಿತು ನನಗೂ ಸಹ ಅಪಾರ ಗೌರವವಿದೆ.  ನನ್ನ ಶಬ್ದ ಬಳಕೆಯ ಕುರಿತು, ಯಾವುದೇ ಸಂಘಟನೆಗಳು ತಪ್ಪಾಗಿ ಅರ್ಥೈಸುವ ಅವಶ್ಯಕತೆ ಇಲ್ಲ.  ಆದರೆ ಕೆಲವೇ ಮಾದ್ಯಮಗಳಲ್ಲಿ ಪ್ರಕಟವಾಗಿರುವ ಹೇಳಿಕೆ ಆಧಾರದ ಮೇಲೆ ಪ್ರತಿಪಕ್ಷದ ನಾಯಕರು ಹಾಗೂ ಕೆಲವು ಸಂಘಟನೆಗಳ ಪ್ರಮುಖರು ಸರ್ಕಾರವನ್ನು ಹಾಗೂ ಸಚಿವರನ್ನು ಅವಮಾನಿಸುವ ರೀತಿಯಲ್ಲಿ ಹೇಳಿಕೆ ನೀಡಿರುವುದು  ನಿಜಕ್ಕೂ ಖೇದಕರ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ.

Advertisement

0 comments:

Post a Comment

 
Top