PLEASE LOGIN TO KANNADANET.COM FOR REGULAR NEWS-UPDATES

♦ಸಭೆ ನಡೆಸಿದ ಉಭಯ ಬಣಗಳ ನಾಯಕರು♦ಸಿಇಸಿ, ಸಂಪುಟ ವಿಸ್ತರಣೆಯ ಕುರಿತು ಚರ್ಚೆ♦ಈಶ್ವರಪ್ಪ, ಶೆಟ್ಟರ್, ಬೊಮ್ಮಾಯಿ, ಉದಾಸಿ, ಕತ್ತಿ ಭಾಗಿ
ಬೆಂಗಳೂರು, ಎ.21: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರ ವಿರುದ್ಧ ಸಿಇಸಿ ಸುಪ್ರಿಂ ಕೋರ್ಟಿನಲ್ಲಿ ವರದಿ ಸಲ್ಲಿಸಿರುವ ಬೆನ್ನಲ್ಲಿಯೇ ಬಜೆಪಿ ಯೊಳಗೆ ಬಿರುಸಿನ ಚಟುವಟಿಕೆಗಳು ಗರಿಗೆದರಿವೆ. ಬಹುದಿನಗಳಿಂದ ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿರುವ ನಾಯಕರಿಂದು ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಸಭೆ ಸೇರಿ ಬಿರುಸಿನ ಚರ್ಚೆ ನಡೆಸಿದ್ದಾರೆ. ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿಂದು ಸಭೆ ನಡೆಸಿರುವ ಜಗದೀಶ್ ಶೆಟ್ಟರ್, ಸಿ.ಎಂ.ಉದಾಸಿ, ಬಸವರಾಜ ಬೊಮ್ಮಾಯಿ, ಉಮೇಶ್ ಕತ್ತಿ ಮತ್ತಿತರ ನಾಯಕರು, ಸಿಇಸಿ ವರದಿಯಿಂದ ಆಘಾತಕ್ಕೊಳಗಾಗಿ ರುವ ಯಡಿಯೂರಪ್ಪರಿಗೆ ಆತ್ಮಸ್ಥೈರ್ಯ ತುಂಬುವಂತೆಯೂ ಹಾಗೂ ಪಕ್ಷ ಅವರ ಬೆನ್ನಿಗೆ ನಿಲ್ಲುವಂತೆಯೂ ಒತ್ತಾಯಿಸಿದ್ದಾರೆನ್ನಲಾಗಿದೆ.ಸಂಪುಟ ವಿಸ್ತರಣೆಯ ಕುರಿತು ಮುಖ್ಯಮಂತ್ರಿ ಸದಾನಂದ ಗೌಡ ಒಲವು ವ್ಯಕ್ತಪಡಿಸಿರುವುದರಿಂದ ಈಶ್ವರಪ್ಪರ ಎದುರಾಳಿ ಬಣದಲ್ಲಿ ಗುರುತಿಸಿಕೊಂಡಿರುವ ನಾಯಕರೊಂದಿಗೆ ಚರ್ಚಿಸಿದ್ದಾರೆ.
ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಎರಡೂ ಬಣದಿಂದ ಯಾವುದೇ ರೀತಿಯ ಭಿನ್ನಮತ ವ್ಯಕ್ತವಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ನಾಯಕರೊಂದಿಗೆ ಮಾತುಕತೆ ನಡೆದಿದೆನ್ನಲಾಗಿದೆ. ಸದಾನಂದ ಗೌಡರೊಂದಿಗೆ 20ಕ್ಕೂ ಅಧಿಕ ಖಾತೆಗಳಿರುವುದರಿಂದ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಅವನ್ನು ಹಂಚಿಕೆ ಮಾಡುವ ಕುರಿತು ಚರ್ಚೆ ನಡೆದಿದ್ದು, ಯಾವ ಬಣಕ್ಕೂ ಅಸಮಾಧಾನ ವಾಗದ ರೀತಿಯಲ್ಲಿ ಹಂಚಿಕೆ ಮಾಡುವ ಸಂಬಂಧ ನಾಯಕರು ಮಾತುಕತೆ ನಡೆಸಿದ್ದಾರೆ. ದೊಡ್ಡ ಖಾತೆಗಳನ್ನು ಯಡಿಯೂರಪ್ಪ ಬಣದವರಿಗೆ ನೀಡುವಂತೆ ಜಗದೀಶ್ ಶೆಟ್ಟರ್, ಬೊಮ್ಮಾಯಿ, ಉದಾಸಿಯವರು ಈಶ್ವರಪ್ಪ ಮುಂದೆ ಒತ್ತಾಯಿಸಿದ್ದಾರೆ. ಜೊತೆಗೆ ಯಡಿಯೂರಪ್ಪ ವಿರುದ್ಧ ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿದ್ದರೆ ಅವರ ಬೆನ್ನಿಗೆ ಪಕ್ಷ ಯಾವ ರೀತಿ ನಿಲ್ಲಬೇಕು, ಅವರಿಗೆ ಯಾವ ರೀತಿಯ ನೈತಿಕ ಬೆಂಬಲ ನೀಡಬೇಕು ಎಂಬ ಕುರಿತು ಕೂಡಾ ಚರ್ಚೆ ನಡೆದಿದೆನ್ನಲಾಗಿದೆ

Advertisement

0 comments:

Post a Comment

 
Top