PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ ಜುಲೈ ೦೪ : ಉತ್ತರ ಕರ್ನಾಟಕ ಭಾಗದ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಕಾಲುವೆಗಳನ್ನು ಇನ್ನು ಒಂದು ವರ್ಷದೊಳಗೆ ಸಂಪೂರ್ಣವಾಗಿ ಆಧುನೀಕರಣಗೊಳಿಸಲಾಗುವುದು ಎಂದು ರಾಜ್ಯ ಜಲಸಂಪನ್ಮೂಲ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಗಂಗಾವತಿ ತಾಲೂಕು ಮೈಲಾಪರ ಗ್ರಾಮದ ಬಳಿ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ಆಧುನೀಕರಣ ಕಾಮಗಾರಿಯ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.
ಸುಮಾರು ೫೦ ವರ್ಷಗಳ ಹಿಂದೆ ನಿರ್ಮಾಣವಾಗಿರುವ ತುಂಗಭದ್ರಾ ಕಾಲುವೆಗಳು ಅಲ್ಲಲ್ಲಿ ಒಡೆದು ಹೋಗಿ, ಪದೇ ಪದೇ ನೀರು ಸೋರಿಕೆಯಾಗುತ್ತಿದ್ದರಿಂದ ಕೊನೆಯ ಭಾಗದ ರೈತರಿಗೆ ನೀರನ್ನು ಸಮರ್ಪಕವಾಗಿ ಒದಗಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಹಿಂದೆ ಕಾಲುವೆಯನ್ನು ಕೇವಲ ಅಲ್ಲಲ್ಲಿ ಸಣ್ಣ ಪುಟ್ಟ ದುರಸ್ತಿಯನ್ನು ಮಾಡಿಸಲಾಗುತ್ತಿತ್ತು. ಇದರಿಂದಾಗಿ ಸುಮಾರು ೬ ರಿಂದ ೮ ಟಿ.ಎಂ.ಸಿ. ಯಷ್ಟು ನೀರು ಸೋರಿಕೆಯಾಗಿ ರೈತರಿಗೆ ತೊಂದರೆ ಉಂಟಾಗುತ್ತಿತ್ತು. ಇದನ್ನು ಮನಗಂಡ ಈಗಿನ ಸರ್ಕಾರ, ಚಿನಿವಾಲ್ ಅವರ ವರದಿಯ ಆಧಾರದ ಮೇಲೆ ತುಂಗಭದ್ರಾ ಮುಖ್ಯ ಹಾಗೂ ಉಪಕಾಲುವೆಗಳನ್ನು ಸಂಪೂರ್ಣ ಆಧುನೀಕರಣಗೊಳಿಸಲು ಕ್ರಮ ಕೈಗೊಂಡಿದ್ದು, ಈಗಾಗಲೆ ೧೩೧ ಕಿ.ಮೀ. ನಷ್ಟು ಮುಖ್ಯ ಕಾಲುವೆ ಹಾಗೂ ೩೪೫ ಕಿ.ಮೀ. ಉಪಕಾಲುವೆಯನ್ನು ಆಧುನೀಕರಣಗೊಳಿಸಿದ್ದು, ೮ ರಿಂದ ೧೦ ಟಿ.ಎಂ.ಸಿ. ಯಷ್ಟು ನೀರು ಸೋರಿಕೆಯನ್ನು ತಡೆಗಟ್ಟಿ, ಸಮರ್ಪಕವಾಗಿ ಬಳಸಲು ಸಾಧ್ಯವಾಗಿದೆ. ಇನ್ನು ೨೮ ಕಿ.ಮೀ. ನಷ್ಟು ಮುಖ್ಯ ಕಾಲುವೆ ಹಾಗೂ ಎಡದಂಡೆ ಕಾಲುವೆಗೆ ಸಂಬಂಧಿಸಿದ ೬೧೫ ಕಿ.ಮಿ. ಉಪಕಾಲುವೆ ಹಾಗೂ ಬಲದಂಡೆ ಕಾಲುವೆಯ ೫೬೦ ಕಿ.ಮಿ. ಉಪಕಾಲುವೆ ಕಾಮಗಾರಿಯನ್ನು ಇನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಲಾಗುವುದು. ಕಾಮಗಾರಿ ಪೂರ್ಣಗೊಳಿಸಲು ಅಗತ್ಯವಿರುವ ಅನುದಾನವನ್ನು ಹಂತ, ಹಂತವಾಗಿ ಬಿಡುಗಡೆ ಮಾಡಲಾಗುವುದು ಎಂದು ಸಚಿವ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಸಿಂಗಟಾಲೂರು ಏತ ನೀರಾವರಿ: ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೆ ಗೇಟ್‌ಗಳನ್ನು ಅಳವಡಿಸುವ ಕಾರ್ಯ ಪೂರ್ಣಗೊಂಡಿದ್ದು, ೧೮೦೦ ಕೋಟಿ ರೂ.ಗಳ ಈ ಯೋಜನೆಯಿಂದಾಗಿ ಹೂವಿನಹಡಗಲಿ ತಾಲೂಕು- ೩೫೭೯೧ ಎಕರೆ, ಮುಂಡರಗಿ- ೫೫೧೮೬, ಕೊಪ್ಪಳ- ೪೦೧೮೬ ಹಾಗೂ ಗದಗ ತಾಲೂಕಿನ ೩೯೦೭೩ ಎಕರೆ ಸೇರಿದಂತೆ ಒಟ್ಟು ೧೭೦೨೩೬ ಎಕರೆ ಜಮೀನಿಗೆ ನೀರುಣಿಸಲು ಸಾಧ್ಯವಾಗಲಿದೆ. ಈ ಏತ ನೀರಾವರಿ ಯೋಜನೆಯ ಬಲದಂಡೆ ಹಾಗೂ ಎಡದಂಡೆ ಕಾಲುವೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದ್ದು, ಬಲದಂಡೆ ಕಾಲುವೆಯಿಂದ ಸೆಪ್ಟಂಬರ್ ಅಂತ್ಯದೊಳಗೆ ಹೂವಿನ ಹಡಗಲಿ ತಾಲೂಕಿನ ೯೦೦೦ ಎಕರೆಗೆ, ಡಿಸೆಂಬರ್ ವೇಳೆಗೆ ೧೨೦೦೦ ಎಕರೆ ಹಾಗೂ ಮಾರ್ಚ್ ಅಂತ್ಯದ ವೇಳೆಗೆ ಒಟ್ಟು ೪೫೦೦೦ ಎಕರೆಗೆ ನೀರು ಒದಗಿಸಲಾಗುವುದು. ಎಡದಂಡೆ ಕಾಲುವೆಗೆ ಸಂಬಂಧಿಸಿದಂತೆ ಕೊಪ್ಪಳ ತಾಲೂಕಿನ ೨೫ ಕಿ.ಮೀ. ಕಾಲುವೆ ನಿರ್ಮಾಣಕ್ಕೆ ಇನ್ನೆರಡು ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದರು.
ಹಿರೇಹಳ್ಳ ಜಲಾಶಯ: ಹಿರೇಹಳ್ಳ ಜಲಾಶಯವನ್ನು ೨ ಮೀಟರ್ ಎತ್ತರಕ್ಕೆ ಹೆಚ್ಚಿಸುವ ಕುರಿತಂತೆ ೫೪ ಕೋಟಿ ರೂ.ಗಳ ಯೋಜನೆ ಸಿದ್ಧಪಡಿಸಲಾಗಿದ್ದು, ಇದರಿಂದ ಇನ್ನೂ ೪ ಗ್ರಾಮಗಳನ್ನು ಸ್ಥಳಾಂತರಿಸಬೇಕಾಗುತ್ತದೆ. ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಪರಿಹಾರಕ್ಕಾಗಿ ೨೦ ಕೋಟಿ ರೂ.ಗಳನ್ನು ಈಗಾಗಲೆ ಬಿಡುಗಡೆ ಮಾಡಲಾಗಿದೆ. ತುಂಗಭದ್ರಾ ಜಲಾಶಯಕ್ಕೆ ೪ ಸಮಾನಾಂತರ ಜಲಾಶಯಗಳನ್ನು ನಿರ್ಮಿಸುವ ಕುರಿತು ಸರ್ಕಾರ ನಿರ್ಧರಿಸಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಸರ್ಕಾರ ನ್ಯಾಯಾಧೀಕರಣಕ್ಕೆ ತಕರಾರು ಸಲ್ಲಿಸಿದ್ದು, ನ್ಯಾಯಾಧೀಕರಣದಲ್ಲಿ ಸೂಕ್ತ ವಾದ ಮಂಡಿಸಿ ಯೋಜನೆ ಜಾರಿಗೊಳಿಸಲು ಯತ್ನಿಸಲಾಗುವುದು.
ತುಂಗಭದ್ರಾ ಜಲಾಶಯ ಹೂಳು: ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೆಚ್ಚಿನ ಪ್ರಮಾಣದ ಹೂಳನ್ನು ತೆಗೆಸಲು ಅಂತರ್‌ರಾಷ್ಟ್ರೀಯ ಮಟ್ಟದ ಟೆಂಡರ್ ಕರೆಯಲಾಗಿತ್ತು. ಕೆಲವು ಪ್ರತಿಷ್ಠಿತ ಕಂಪನಿಗಳು ಹೂಳು ತೆಗೆಯಲು ಅಪಾರ ಮೊತ್ತದ ಹಣ ಖರ್ಚಾಗಲಿದೆ ಎಂಬುದಾಗಿ ತಿಳಿದುಬಂದಿದೆ. ರಾಜ್ಯದ ಕೆಲವು ಕಾರ್ಖಾನೆ/ಕಂಪನಿಗಳು ಹೂಳು ತೆಗೆಯಲು ಬಂಡವಾಳ ಹೂಡಿಕೆಗೆ ಪ್ರಸ್ತಾವನೆ ಸಲ್ಲಿಸಿ, ಇದಕ್ಕಾಗಿ ನೀರು ಪೂರೈಸಬೇಕು ಎನ್ನುವ ಬೇಡಿಕೆಯನ್ನು ಸಲ್ಲಿಸಿವೆ. ಈ ಕುರಿತಂತೆ ಸರ್ಕಾರ ಕೂಲಕಂಷವಾಗಿ ಪರಿಶೀಲಿಸಿ, ಇದರಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಸಂಸದ ಶಿವರಾಮಗೌಡ, ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಗಣ್ಣ ಕರಡಿ, ಕಾಡಾ ಅಧ್ಯಕ್ಷ ಬಸವನಗೌಡ ಬ್ಯಾಗವಾಟ, ಶಾಸಕರುಗಳಾದ ಪರಣ್ಣ ಮುನವಳ್ಳಿ, ಶಿವರಾಜ ತಂಗಡಗಿ, ಜಲಸಂಪನ್ಮೂಲ ಇಲಾಖೆ ಮುಖ್ಯ ಅಭಿಯಂತರ ದೇವರಾಜ್ ಸೇರಿದಂತೆ ವಿವಿಧ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

0 comments:

Post a Comment

 
Top