PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ. ಜು. ೩೦ : ದೇಶದಲ್ಲಿ ಜನಸಂಖ್ಯೆ ಹೆಚ್ಚಳ ಪ್ರಮಾಣ ಅಧಿಕವಾಗಿರುವುದರಿಂದ, ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ, ಆಹಾರ, ವಸತಿ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ನಿರೀಕ್ಷಿತ ಮಟ್ಟದಲ್ಲಿ ಸಾಧ್ಯವಾಗುತ್ತಿಲ್ಲ. ಸರಳ ಹಾಗೂ ಸಣ್ಣ ಕುಟುಂಬದಿಂದ ಸಮೃದ್ಧಿ ಕಾಣಲು ಸಾಧ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಿ.ಬಿ. ಬಸವರಾಜ್ ಅವರು ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಇಲಾಖೆ, ಆಯುಷ್ ಇಲಾಖೆ, ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಗರದ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯಡಿ ಏರ್ಪಡಿಸಲಾಗಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದೇಶದಲ್ಲಿ ಜನಸಂಖ್ಯೆ ಹೆಚ್ಚಳ ಪ್ರಮಾಣ ಅಧಿಕವಾಗಿದೆ. ಜನಸಂಖ್ಯಾ ಸ್ಫೋಟದ ಪರಿಣಾಮದಿಂದಾಗಿ ದೇಶದ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೊಳಿಸುತ್ತಿರುವ ಹಲವಾರು ಯೋಜನೆಗಳು ನಿರೀಕ್ಷಿತ ಯಶಸ್ಸು ಕಾಣುತ್ತಿಲ್ಲ. ಪಂಚವಾರ್ಷಿಕ ಯೋಜನೆಗಳಂತಹ ದೂರದೃಷ್ಠಿಯ ಯೋಜನೆಗಳು ದಿಕ್ಕುತಪ್ಪಲು ಇದೇ ಮೂಲ ಕಾರಣವಾಗಿದೆ. ಜನಸಂಖ್ಯೆ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಹಮ್ಮಿಕೊಳ್ಳುತ್ತಿರುವ ಜನಜಾಗೃತಿ ಕಾರ್ಯಕ್ರಮಗಳು ನಿರೀಕ್ಷಿತ ಮಟ್ಟದಲ್ಲಿ ತಲುಪುತ್ತಿಲ್ಲ. ಗ್ರಾಮೀಣ ಪ್ರದೇಶದ ಜನರಲ್ಲಿ ಮನೆ ಮಾಡಿರುವ ಮೂಢನಂಬಿಕೆ, ಅನಕ್ಷರತೆ ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮಗಳ ಯಶಸ್ವಿಗೆ ಅಡ್ಡಿಯುಂಟು ಮಾಡಿವೆ. ಗ್ರಾಮೀಣ ಜನರು ಸಾಕ್ಷರರಾಗಬೇಕು, ಶಿಕ್ಷಣದ ಮಟ್ಟ ಹೆಚ್ಚಬೇಕು, ಬಡತನ, ನಿರುದ್ಯೋಗ ಸಮಸ್ಯೆ ನಿವಾರಣೆಯಾಗಬೇಕು. ಸರಳ ಕುಟುಂಬದಿಂದ ಸಮೃದ್ಧಿ ಕಾಣಲು ಸಾಧ್ಯವೆಂಬ ಅಂಶ ಜನರ ಮನದಾಳಕ್ಕೆ ಇಳಿಯಬೇಕು. ಆಗ ಮಾತ್ರ ಜನಸಂಖ್ಯಾ ಸ್ಫೋಟವನ್ನು ತಡೆಗಟ್ಟಲು ಸಾಧ್ಯವಾಗಲಿದೆ. ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯ ಜಾರಿಯ ನಂತರ ಗ್ರಾಮೀಣ ಪ್ರದೇಶಗಳಲ್ಲಿ ತಾಯಿ ಮರಣ, ಶಿಶು ಮರಣ ಪ್ರಮಾಣ ಕಡಿಮೆಯಾಗಿದೆ. ಈ ಯೋಜನೆಯಡಿ ಜಿಲ್ಲೆಯ ೪೨ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಿನದ ೨೪ ಗಂಟೆಯೂ ಹೆರಿಗೆ ಮಾಡಿಸಲು ಸೌಲಭ್ಯ ಕಲ್ಪಿಸಲಾಗಿದ್ದು, ಇದರಿಂದಾಗಿ ಸುರಕ್ಷಿತ ಹೆರಿಗೆ ಆಗುತ್ತಿದೆ. ಜನಸಂಖ್ಯಾ ನಿಯಂತ್ರಣಕ್ಕಾಗಿ ಹಾಗೂ ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಿ.ಬಿ. ಬಸವರಾಜ್ ಅವರು ನುಡಿದರು.
ಜನಸಂಖ್ಯಾ ಸ್ಪೋಟದಿಂದಾಗುವ ದುಷ್ಪರಿಣಾಮ ಹಾಗೂ ಪರಿಹಾರ ಕುರಿತಂತೆ ವಿಶೇಷ ಉಪನ್ಯಾಸ ನೀಡಿದ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಸಮಾಜಶಾಸ್ತ್ರ ಉಪನ್ಯಾಸಕ ಎ.ಆರ್. ಲೋಕಾಪುರ ಅವರು ಮಾತನಾಡಿ, ೧೯೮೭ ರಲ್ಲಿ ವಿಶ್ವದ ಜನಸಂಖ್ಯೆ ೫೦೦ ಕೋಟಿ ತಲುಪಿದ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನಿಸೆಫ್ ಆಯಾ ದೇಶಗಳ ಸಹಭಾಗಿತ್ವದಲ್ಲಿ ಮೊಟ್ಟ ಮೊದಲ ಬಾರಿಗೆ ಜನಸಂಖ್ಯಾ ಸ್ಫೋಟದ ಬಗ್ಗೆ ವಿಶ್ವದ ಗಮನ ಸೆಳೆಯಲು ಜನಸಂಖ್ಯಾ ದಿನಾಚರಣೆ ಆಚರಿಸಲಾಯಿತು. ೧೯೫೦ ಕ್ಕೂ ಮೊದಲು ದೇಶದಲ್ಲಿ ಜನನ ಮತ್ತು ಮರಣದ ಪ್ರಮಾಣದಲ್ಲಿ ಸಾಮ್ಯತೆ ಇತ್ತು. ನಂತರ ವೈದ್ಯಕೀಯ ಕ್ಷೇತ್ರಗಳಲ್ಲಿ ಉಂಟಾದ ಕ್ರಾಂತಿಕಾರಕ ಸುಧಾರಣೆಯಿಂದಾಗಿ ಜನನ ಮತ್ತು ಮರಣದ ಪ್ರಮಾಣದಲ್ಲಿ ಏರಿಳಿತ ಕಂಡುಬಂತು. ಈ ಅವಧಿಯಲ್ಲಿ ದೇಶದ ಜನಸಂಖ್ಯೆ ಅಗಾಧವಾಗಿ ಬೆಳೆಯಲು ಸಾಧ್ಯವಾಯಿತು. ೧೯೯೧ ರಲ್ಲಿ ಜನಸಂಖ್ಯಾ ಹೆಚ್ಚಳ ಪ್ರಮಾಣ ಶೇ. ೨. ೧೪ ರಷ್ಟಿತ್ತು. ಸದ್ಯ ಇದರ ಪ್ರಮಾಣ ಶೇ. ೧. ೩ ರಷ್ಟಿದೆ. ಭಾರತದಲ್ಲಿ ಪ್ರತಿ ವರ್ಷ ಉತ್ಪಾದನೆಯಾಗುತ್ತಿರುವ ಜನಸಂಖ್ಯೆ ಇಡೀ ಆಸ್ಟ್ರೇಲಿಯಾ ದೇಶದ ಒಟ್ಟಾರೆ ಜನಸಂಖ್ಯೆಯಷ್ಟಿದೆ. ಭಾರತದ ಪ್ರತಿ ೪ ವರ್ಷದ ಜನಸಂಖ್ಯೆಯು ಇಂಗ್ಲೇಂಡ್ ದೇಶದ ಇಡೀ ಜನಸಂಖ್ಯೆಯ ಪ್ರಮಾಣದಷ್ಟು, ೧೦ ವರ್ಷದ ಜನಸಂಖ್ಯೆಯು ಇಡೀ ಪಾಕಿಸ್ಥಾನದ ಒಟ್ಟು ಜನಸಂಖ್ಯೆಗೆ ಸಮನಾಗಿದೆ. ಜನಸಂಖ್ಯೆಯಲ್ಲಿ ಇಡೀ ವಿಶ್ವಕ್ಕೆ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಭಾರತ ಎರಡನೆ, ಅಮೆರಿಕಾ ಮೂರನೆ ಹಾಗೂ ಇಂಡೋನೇಷ್ಯಾ ದೇಶ ನಾಲ್ಕನೆ ಸ್ಥಾನದಲ್ಲಿದೆ. ಜನಸಂಖ್ಯಾ ನಿಯಂತ್ರಣಕ್ಕೆ ಚೀನಾ ದೇಶ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮದಿಂದಾಗಿ ಚೀನಾ ದೇಶದಲ್ಲಿ ಜನಸಂಖ್ಯಾ ಸ್ಫೋಟ ನಿಯಂತ್ರಣಕ್ಕೆ ಬಂದಿದೆ. ಇನ್ನು ಕೆಲವೇ ವರ್ಷಗಳಲ್ಲಿ ಭಾರತ ಇಡೀ ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಲಿದೆ. ಜನಸಂಖ್ಯಾ ಸ್ಪೋಟವನ್ನು ನಿಯಂತ್ರಿಸಲು ದೇಶದಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಯಶಸ್ಸಿನ ವೇಗ ಕಡಿಮೆ ಇದೆ. ಗ್ರಾಮೀಣ ಜನರಲ್ಲಿ ಮನೆಮಾಡಿರುವ ಮೂಢನಂಬಿಕೆ ತೊಲಗಬೇಕು. ಸಾಕ್ಷರತೆಯ ಪ್ರಮಾಣ ಹೆಚ್ಚಬೇಕು ಅಲ್ಲದೆ ಜನಸಂಖ್ಯೆ ನಿಯಂತ್ರಿಸುವ ಪ್ರಯತ್ನ ನಿರಂತರವಾಗಿ ನಡೆಯಬೇಕು. ಆಗ ಮಾತ್ರ ಜನಸಂಖ್ಯೆ ಉತ್ಪಾದನೆಯ ಪ್ರಮಾಣ ತಗ್ಗಿ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಗವಿಸಿದ್ದೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಸಪ್ಪ ವಾಲಿಕಾರ, ಗವಿಸಿದ್ದೇಶ್ವರ ಕಾಲೇಜಿನ ಪ್ರಾಂಶುಪಾಲ ಪರೀಕ್ಷಿತರಾಜ್, ಜಿಲ್ಲಾ ವಾರ್ತಾಧಿಕಾರಿ ತುಕಾರಾಂ ರಾವ್ ಬಿ.ವಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಎಸ್. ಮಾದರ್ ಸ್ವಾಗತಿಸಿದರು, ಸುಲೇಖಾ ದೇಸಾಯಿ ಪ್ರಾರ್ಥಿಸಿದರು, ಆರೋಗ್ಯ ಇಲಾಖೆಯ ಆರ್.ಎಸ್. ಇಂಚೂರ್ ವಂದಿಸಿದರು. ಉಪನ್ಯಾಸಕ ಬಸವರಾಜ ಪೂಜಾರ್ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದ ಪ್ರಾರಂಭಕ್ಕೂ ಮುನ್ನ ಕಿರಿಯ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದ ವಿದ್ಯಾರ್ಥಿಗಳು, ಶ್ರೀ ಗವಿಸಿದ್ದೇಶ್ವರ ಕಾಲೇಜಿನ ವಿದ್ಯಾರ್ಥಿಗಳು, ಎನ್.ಸಿ.ಸಿ. ಮತ್ತು ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿಗಳು ಜನಜಾಗೃತಿ ರ್‍ಯಾಲಿ ನಡೆಸಿದರು.

Advertisement

0 comments:

Post a Comment

 
Top