PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಮಾ.೧೯ : ಇದೇ ಮಾ. ೨೩ ಹಾಗೂ ೨೪ ರಂದು ಎರಡು ದಿನಗಳ ಕಾಲ ಆನೆಗೊಂದಿಯಲ್ಲಿ ಅದ್ಧೂರಿ ಆನೆಗೊಂದಿ ಉತ್ಸವ ಏರ್ಪಡಿಸಲಾಗಿದ್ದು, ಈ ಬಾರಿ ಎರಡು ವೇದಿಕೆಗಳಲ್ಲಿ ಉತ್ಸವದ ಅಂಗವಾಗಿ ವೈವಿಧ್ಯಮಯ ಸಾಂಸ್ಕೃತಿಕ ರಸದೌತಣ ಸವಿಯಬಹುದಾಗಿದೆ. ವೇದಿಕೆಗಳಲ್ಲಿ ನಡೆಯುವ ವೈವಿಧ್ಯಮಯ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳ ಖ್ಯಾತನಾಮ ಕಲಾವಿದರು, ಖ್ಯಾತ ಚಲನಚಿತ್ರ ನಟ ಶಿವರಾಜ್‌ಕುಮಾರ್, ಚಲನಚಿತ್ರ ಹಿನ್ನೆಲೆ ಗಾಯಕರುಗಳಾದ ರಾಜೇಶ್ ಕೃಷ್ಣನ್, ಹೇಮಂತ್, ಚೈತ್ರ, ಚೇತನ್, ಸೇರಿದಂತೆ ಹಲವು ನಟ, ನಟಿಯರು, ಗಂಗಾವತಿಯ ಬಿ. ಪ್ರಾಣೇಶ್ ಅವರು ಪಾಲ್ಗೊಳ್ಳಲಿದ್ದಾರೆ.
ಆನೆಗೊಂದಿ ಉತ್ಸವ ಅಂಗವಾಗಿ ಆನೆಗೊಂದಿಯ ಹೊರವಲಯ ಬಳಿ ನಿರ್ಮಿಸಲಾಗಿರುವ ಶಾಶ್ವತ ವೇದಿಕೆಯಲ್ಲಿ ಮುಖ್ಯವೇದಿಕೆಯಾಗಿ ಶ್ರೀ ಪ್ರೌಢದೇವರಾಯ ವೇದಿಕೆ ಹಾಗೂ ಆನೆಗೊಂದಿಯ ಗ್ರಾಮದ ಒಳಗೆ ನಿರ್ಮಿಸಿರುವ ಎರಡನೆ ವೇದಿಕೆ ಕುಪ್ಪಮ್ಮ ರಾಣಿ ವೇದಿಕೆ ಸೇರಿದಂತೆ ಒಟ್ಟು ೦೨ ವೇದಿಕೆಗಳನ್ನು ನಿರ್ಮಿಸಲಾಗಿದೆ.
ಮಾ. ೨೩ ರಂದು ಸಂಜೆ ೪ ಗಂಟೆಗೆ ಮುಖ್ಯ ವೇದಿಕೆಯಾದ ಶ್ರೀ ಪ್ರೌಢದೇವರಾಯ ವೇದಿಕೆಯಲ್ಲಿ ಆನೆಗೊಂದಿ ಉತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪರಮಪೂಜ್ಯ ವೇದಮೂರ್ತಿ ಶ್ರೀ ಕಲ್ಲಯ್ಯ ಅಜ್ಜನವರು ಸಮಾರಂಭದ ದಿವ್ಯ ಸಾನಿಧ್ಯ ವಹಿಸುವರು. ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಾಜ್ಯ ಸಹಕಾರ ಹಾಗೂ ಕೃಷಿ ಮಾರುಕಟ್ಟೆ ಸಚಿವ ಲಕ್ಷ್ಮಣ ಎಸ್ ಸವದಿ ಅವರು ವಿಜಯನಗರ ಸಾಮ್ರಾಜ್ಯದ ಮಾತೃ ಸ್ಥಾನ ಆನೆಗೊಂದಿ ಗ್ರಂಥ ಬಿಡುಗಡೆ ಮಾಡುವರು. ಕನ್ನಡ ಮತ್ತು ಸಂಸ್ಕೃತಿ, ಸಣ್ಣ ನೀರಾವರಿ ಹಾಗೂ ಜವಳಿ ಸಚಿವ ಗೋವಿಂದ ಕಾರಜೋಳ ಅವರು ಆನೆಗೊಂದಿ ಕುರಿತ ಮಾಹಿತಿ ಪುಸ್ತಕ ಬಿಡುಗಡೆ ಮಾಡುವರು. ಪ್ರವಾಸೋದ್ಯಮ, ಮೂಲಭೂತ ಸೌಕರ್ಯ ಅಭಿವೃದ್ಧಿ ಹಾಗೂ ಯುವಜನ ಸೇವಾ ಸಚಿವ ಜಿ. ಜನಾರ್ಧನ ರೆಡ್ಡಿ ಅವರು ಇದೇ ಸಂದರ್ಭದಲ್ಲಿ ಶ್ರೀಕೃಷ್ಣದೇವರಾಯರ ಕಂಚಿನ ಪುತ್ಥಳಿ ಅನಾವರಣಗೊಳಿಸುವರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಸಿ.ಸಿ. ಪಾಟೀಲ, ಡಾ: ಡಿ.ಎಂ. ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುನೀಲ ವಲ್ಲ್ಯಾಪುರ, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು, ಹೈ-ಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಅಮರನಾಥ ಪಾಟೀಲ, ಜಿ.ಪಂ. ಅಧ್ಯಕ್ಷೆ ಜ್ಯೋತಿ ನಾಗರಾಜ ಬಿಲ್ಗಾರ್, ಸಂಸದ ಶಿವರಾಮಗೌಡ, ಶಾಸಕರುಗಳಾದ ಅಮರೇಗೌಡ ಪಾಟೀಲ ಬಯ್ಯಾಪುರ, ಈಶಣ್ಣ ಗುಳಗಣ್ಣವರ್, ಶಶಿಲ್ ಜಿ. ನಮೋಶಿ, ಹೆಚ್.ಸಿ. ನೀರಾವರಿ, ಮನೋಹರ ಮಸ್ಕಿ, ಹಾಲಪ್ಪ ಆಚಾರ್, ಜಿ.ಪಂ. ಉಪಾಧ್ಯಕ್ಷೆ ಡಾ. ಸೀತಾ ಗೂಳಪ್ಪ ಹಲಗೇರಿ, ತಾ.ಪಂ., ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಸೇರಿದಂತೆ ಗಣ್ಯಾತಿ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ವಿಶೇಷ ಅತಿಥಿಗಳಾಗಿ ಖ್ಯಾತ ಚಲನಚಿತ್ರ ನಟ ಶಿವರಾಜ್‌ಕುಮಾರ್ ಅವರು ಪಾಲ್ಗೊಳ್ಳಲಿದ್ದು, ಮಾಜಿ ಸಂಸದ ಹೆಚ್.ಜಿ. ರಾಮುಲು, ಆನೆಗೊಂದಿ ರಾಜವಂಶಸ್ಥರಾದ ಶ್ರೀರಂಗದೇವರಾಯಲು, ರಾಜಾ ರಾಮದೇವರಾಯಲು, ರಾಜಾ ನರಸಿಂಹದೇವರಾಯಲು, ಕೃಷ್ಣದೇವರಾಯಲು ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು.
ಮಾ. ೨೩ ಹಾಗೂ ೨೪ ರಂದು ಎರಡು ದಿನಗಳ ಕಾಲ ಆನೆಗೊಂದಿಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಲಿದ್ದು, ಖ್ಯಾತ ಚಲನಚಿತ್ರ ಹಿನ್ನೆಲೆಗಾಯಕರಾದ ಬೆಂಗಳೂರಿನ ಅಜಯ್ ವಾರಿಯರ್ ಹಾಗೂ ಸಂಗಡಿಗರು, ರಾಜೇಶ್ ಕೃಷ್ಣನ್, ಹೇಮಂತ್, ಚೈತ್ರ, ಬಿ.ಕೆ. ಸುಮಿತ್ರಾ, ಚಲನಚಿತ್ರ ನಟ, ನಟಿಯರಾದ ಯಶ್, ಅನಿರುದ್ಧ್, ರಾಗಿಣಿ, ಹರಿಪ್ರಿಯ, ನೀತು, ಯಜ್ಞಾಶೆಟ್ಟಿ, ಹರೀಶ್ ಮುಂತಾದವರಿಂದ ಸಂಗೀತ ಹಾಗೂ ನೃತ್ಯ ವೈವಿಧ್ಯ, ಗಂಗಾವತಿಯ ಬಿ. ಪ್ರಾಣೇಶ್ ಅವರಿಂದ ಹಾಸ್ಯೋತ್ಸವ ಸೇರಿದಂತೆ, ಹರಿಯಾಣ, ಪಂಜಾಬ್, ಉತ್ತರಪ್ರದೇಶ, ರಾಜಸ್ಥಾನ ಮುಂತಾದ ವಿವಿಧ ರಾಜ್ಯಗಳ ಕಲಾವಿದರ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆಯಾಗಿವೆ.

Advertisement

0 comments:

Post a Comment

 
Top