PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಮಾ. : ಆನೆಗೊಂದಿ ಉತ್ಸವದ ಅಂಗವಾಗಿ ಮಾ. ೨೩ ರಂದು ಬೆಳಿಗ್ಗೆ ೧೧ ಗಂಟೆಗೆ ಆನೆಗೊಂದಿಯ ಶ್ರೀ ದುರ್ಗಾದೇವಿ ದೇವಸ್ಥಾನ ಬಳಿಯಿಂದ ಮುಖ್ಯ ವೇದಿಕೆಯಾದ ಶ್ರೀ ಪ್ರೌಢದೇವರಾಯ ವೇದಿಕೆಯವರೆಗೆ ವೈವಿಧ್ಯಮಯ ಜಾನಪದ ಕಲಾತಂಡಗಳಿಂದ ಆಕರ್ಷಕ ಜಾನಪದ ವಾಹಿನಿ ಅನಾವರಣಗೊಳ್ಳಲಿದೆ.
ಮಾ. ೨೩ ರಂದು ಬೆಳಿಗ್ಗೆ ೧೧ ಗಂಟೆಗೆ ಆನೆಗೊಂದಿ ರಾಜ ವಂಶಸ್ಥರಿಂದ ಶ್ರೀ ದುರ್ಗಾದೇವಿ ಹಾಗೂ ಆನೆ ಅಂಬಾರಿಗೆ ಪೂಜೆ ನೆರವೇರಿಸುವುದರೊಂದಿಗೆ ಜಾನಪದ ಕಲಾವಾಹಿನಿಗೆ ಅಧಿಕೃತ ಚಾಲನೆ ದೊರೆಯಲಿದ್ದು, ಮೆರವಣಿಗೆ ಶ್ರೀ ದುರ್ಗಾದೇವಿ ದೇವಸ್ಥಾನದಿಂದ ಮುಖ್ಯ ವೇದಿಕೆಯಾದ ಶ್ರೀ ಪ್ರೌಢದೇವರಾಯ ವೇದಿಕೆಯವರೆಗೆ ವೈವಿಧ್ಯಮಯ ಜಾನಪದ ಕಲಾ ತಂಡದೊಂದಿಗೆ ಸಾಗಲಿದೆ. ಜಾನಪದ ಕಲಾವಾಹಿನಿಯ ಉದ್ಘಾಟನೆಯನ್ನು ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಅವರು ಉದ್ಘಾಟಿಸುವರು. ಜಾನಪದ ಕಲಾವಾಹಿನಿಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು ಕಲಾವಾಹಿನಿಯಲ್ಲಿ ಮುಂಚೂಣಿಯಲ್ಲಿದ್ದರೆ, ವಿವಿಧ ಜಾನಪದ ಕಲಾ ತಂಡಗಳು ತಮ್ಮ ಕಲಾ ಪ್ರದರ್ಶನದೊಂದಿಗೆ ಮೆರವಣಿಗೆಯಲ್ಲಿ ಸಾಗಲಿದ್ದಾರೆ. ಜಾನಪದ ಕಲಾವಾಹಿನಿಯಲ್ಲಿ ಭಾಗವಹಿಸುವ ವಿವಿಧ ಕಲಾ ತಂಡಗಳ ವಿವರ ಇಂತಿದೆ. ರಾಮನಗರದ ಶಿವಣ್ಣ ಮತ್ತು ತಂಡದಿಂದ ಪೂಜಾ ಕುಣಿತ, ದಾವಣಗೆರೆಯ ಮಂಜಣ್ಣ ಮತ್ತು ತಂಡದಿಂದ ಡೊಳ್ಳು ಕುಣಿತ, ಶಿವಮೊಗ್ಗದ ಅರ್ಚನಾ ಮತ್ತು ತಂಡದಿಂದ ಮಹಿಳಾ ಡೊಳ್ಳು ಕುಣಿತ, ತುಮಕೂರಿನ ಹೊಸಳಯ್ಯ ಹಾಗೂ ತಂಡದಿಂದ ವೀರಭದ್ರ ಕುಣಿತ, ಮಂಡ್ಯದ ಸತೀಶ್ ಕುಮಾರ ಮತ್ತು ತಂಡದಿಂದ ಗಾರುಡಿ ಗೊಂಬೆ, ದಂಡಿನಶಿವರದ ಡಿ.ಎಸ್. ಗಂಗಾಧರ ಗೌಡ ತಂಡದಿಂದ ಸೋಮನ ಕುಣಿತ, ಶ್ರೀರಂಗಪಟ್ಟಣದ ಕೊಡಿಯಾಲಸಿದ್ದೇಗೌಡ ತಂಡದಿಂದ ಪಟ ಕುಣಿತ, ಕೆರೂರಿನ ಕುಶಾಲಪ್ಪ ತಂಡದಿಂದ ಏಕತಾರಿ ಭಜನೆ, ತುಮಕೂರಿನ ವಿಶ್ವನಾಥ ಮತ್ತು ಸಂಗಡಿಗರಿಂದ ಚಿಟ್ಟಿಮೇಳ, ಬೆಂಗಳೂರಿನ ಮಹದೇವ ತಂಡದಿಂದ ಕಂಸಾಳೆ, ಹಾವೇರಿ ಜಿಲ್ಲೆ ಲಿಂಗದಳ್ಳಿಯ ಮಹೇಶ್‌ಗೌಡ ತಂಡದಿಂದ ಸಂಬಾಳ ವಾದನ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವೆಂಕಟೇಶ್ ತಂಡದಿಂದ ತಮಟೆವಾದ್ಯ, ದಾವಣಗೆರೆಯ ವಿ. ಉಮೇಶ ತಂಡದಿಂದ ನಗಾರಿ ವಾದ್ಯ, ಜಗಳೂರಿನ ಲಿಂಬ್ಡಿಬಾಯಿ ತಂಡದಿಂದ ಲಂಬಾಣಿ ನೃತ್ಯ, ಇಟಗಿಯ ಪ್ಯಾಟಿ ಬಸವೇಶ್ವರ ಜಾನಪದ ಕಲಾಸಂಘದ ಸಿದ್ದಲಿಂಗಯ್ಯ ಚೌಡಿ ಅವರಿಂದ ಕರಡಿ ಮಜಲು, ಕೊಪ್ಪಳದ ಕರ್ನಾಟಕ ಬ್ರಾಸ್ ಬ್ಯಾಂಡ್ ಕಂಪನಿಯ ಪ್ರಕಾಶ ಭಜಂತ್ರಿ ತಂಡದಿಂದ ಬ್ಯಾಂಜೋಮೇಳ, ಬಿಜಾಪುರದ ಸುರೇಶ ಭಜಂತ್ರಿ ತಂಡದಿಂದ ಖಣಿ ಹಲಿಗೆ, ಕಿನ್ನಾಳದ ಕಾಶಿವಿಶ್ವನಾಥ ತಂಡದಿಂದ ಕರಡಿ ಮಜಲು, ಶಿವಪುರದ ಹನುಮಂತಪ್ಪ ಮಾಸ್ತರ್ ತಂಡದಿಂದ ಬ್ಯಾಂಜೋ ಮೇಳ, ಹನುಮಾಪುರದ ಕೆಂಚಪ್ಪ ಫಕೀರಪ್ಪ ಕುರಿ ತಂಡದಿಂದ ಡೊಳ್ಳು ಕುಣಿತ, ಕೊಪ್ಪಳದ ಬಸವೇಶ್ವರ ಜಾನಪದ ಕಲಾ ತಂಡದಿಂದ ಹಲಿಗೆ ಮೇಳ, ನಾವಲಗಿಯ ಮಲ್ಲಪ್ಪ ಹೂಗಾರ ಮತ್ತು ತಂಡದಿಂದ ಸಂಭಾಳ ವಾದನ, ಕೂಡ್ಲಿಗಿಯ ವೀಣಾ ಕಲಾ ಸಂಘದಿಂದ ಮಹಿಳಾ ಭಜನೆ, ಬಳ್ಳಾರಿಯ ಮೋಹನ ಮತ್ತು ತಂಡದಿಂದ ತಾಷರಂಡೋಲ, ವೀರಯ್ಯ ಸಂಶಿಮಠ ಅವರಿಂದ ವೀರಗಾಸೆ, ಗಂಗಾವತಿಯ ವೀರಣ್ಣ ಮರಿಯಪ್ಪ ನಾಗಲೀಕರ ತಂಡದಿಂದ ಸಮಾಳ ವಾದನ, ಮರಿಯಮ್ಮನಹಳ್ಳಿಯ ಮಾತಾ ಮಂಜಮ್ಮ ಜೋಗತಿ ತಂಡದಿಂದ ಜೋಗತಿ ಕುಣಿತ ಹೀಗೆ ಹತ್ತು ಹಲವು ವೈವಿಧ್ಯಮಯ ತಂಡಗಳು ಜಾನಪದ ವಾಹಿನಿಯಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲಿದ್ದು ಜಾನಪದ ರಸದೌತಣ ಸವಿಯಬಹುದಾಗಿದೆ.

Advertisement

0 comments:

Post a Comment

 
Top