PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-21- ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್ ಇವರು ಆಂದ್ರಪ್ರದೇಶದ ಕುಪ್ಪಂದಲ್ಲಿರುವ ದ್ರಾವಿಡ ವಿಶ್ವವಿದ್ಯಾಲಯಕ್ಕೆ ಡಾ.ಕೆ.ಶಾರದಾರವರ ಮಾರ್ಗದರ್ಶನದಲ್ಲಿ ಸಲ್ಲಿಸಿದ 'ಕೊಪ್ಪಳ ಜಿಲ್ಲೆಯ ಜೈನ ನೆಲೆಗಳ ಸಾಂಸ್ಕೃತಿಕ ಅಧ್ಯಯನ' ಎಂಬ ವಿಷಯದ ಮೇಲಿನ ಸಂಶೋಧನಾ 'ಕಿರುಪ್ರಬಂಧ'ಕ್ಕೆ ಎಂ.ಫಿಲ್ ಪದವಿ ಲಭಿಸಿದೆ. ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್ ಇವರು ಈ ಮುಂಚೆ ೨೦೦೭ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಡಾ.ಸಿ ನಾಗಭೂಷಣರವರ ಮಾರ್ಗದರ್ಶನದಲ್ಲಿ 'ಕೊಪ್ಪಳ ಜಿಲ್ಲೆಯ ಶಾಸನಗಳ ಸಾಂಸ್ಕೃತಿಕ ಅಧ್ಯಯನ' ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದಿದ್ದು ಅದನ್ನು ಈಗಾಗಲೇ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್‌ರವರು ಪಿಎಚ್.ಡಿ ಪದವಿ ಪಡೆದ ಮೇಲೆ ಎಂ.ಫಿಲ್ ಪದವಿ ಪಡೆದಿರುವುದು ಬಹಳ ವಿಶೇಷ. ಅಲ್ಲದೆ ಸಂಸಾರಸಗ್ಗ, ಮಾನ್ವಿಯ ಮಹನೀಯರು ಎಂಬ ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಎಂ.ಫಿಲ್ ಪದವಿ ಪಡೆದ 'ಕೊಪ್ಪಳ ಜಿಲ್ಲೆಯ ಜೈನ ನೆಲೆಗಳು' ಎಂಬ ಕೃತಿಯನ್ನು ಸದ್ಯದಲ್ಲೆ ಪ್ರಕಟಿಸಲಿದ್ದಾರೆ. ಮುಂದೆ ಯಾವುದಾದರೂ ವಿಶ್ವವಿದ್ಯಾಲಯ ಡಿ.ಲಿಟ್ ಪದವಿಗೆ ಅಧ್ಯಯನಕ್ಕೆ ಅವಕಾಶ ದೊರೆತರೆ ಸಂಶೋಧನೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಎಂ.ಫಿಲ್ ಪದವಿ ಪಡೆದ ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್ ಇವರನ್ನು ಕಾಲೇಜು ಆಡಳಿತ ಮಂಡಳಿ, ಪ್ರಾಚಾರ್ಯರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

Advertisement

0 comments:

Post a Comment

 
Top