PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಮತ್ತು  ವೀರಶೈವ ಲಿಂಗಾಯತ ಎಂದು ಜಾತಿ ಪ್ರಮಾಣ ಪತ್ರ ಕೊಡುವುದನ್ನು ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಿ ದಿ. ೨೮ರಂದು ಶನಿವಾರ ಬೆಂಗಳೂರಿನ ಪುಟ್ಟಣಶೆಟ್ಟಿ ಟೌನ್ ಹಾಲ್ ಎದುರಿಗೆ ಎಲ್ಲಾ ಮಠಾಧೀಶರ ನೇತೃತ್ವದಲ್ಲಿ ಪ್ರತಿಭಟನಾ ಸಭೆ ಹಾಗು ಅಲ್ಲಿಂದ ಫ್ರಿಡಂ ಪಾರ್ಕವರೆಗೆ ಬೃಹತ್ ರ‍್ಯಾಲಿ,ಮೆರವಣಿಗೆ ನಡೆಸಲಾಗುವುದು ಎಂದು ಬಸವಮಂಟಪದ ಚನ್ನಬಸವಾನಂದ ಮಹಾಸ್ವಾಮಿಗಳು ಹೇಳಿದರು. ಅವರು ನಗರದ ಮೀಡಿಯಾ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. 
  ಜಿಲ್ಲೆಯ ಎಲ್ಲಾ ಲಿಂಗಾಯತ ಮಠಾಧೀಶರು, ಬಸವ ತತ್ವಾಭಿಮಾನಿಗಳ ಸಂಘಟನೆಗಳು, ಬಸವ ಪರ ಸಂಘ ಸಂಸ್ಥೆಗಳು ಇದನ್ನು ಬೆಂಬಲಿಸಿ ಸಹಸ್ರ ಸಂಖ್ಯೆಯಲ್ಲಿ ಬಂದು ರ‍್ಯಾಲಿಯಲ್ಲಿ ಭಾಗವಹಹಿಸಬೇಕೆಂದು ಕರೆ ಕೊಟ್ಟಿದ್ದಾರೆ. ಒಕ್ಕೂಟದ ಅಧ್ಯಕ್ಷರಾಗಿರುವದ ಜಗದ್ಗುರು ಡಾ.ಮಾತೆ ಮಹಾದೇವಿಯವರು ಹಾಗೂ ಬಸವ ಸಮಿತಿಯ ಅಧ್ಯಕ್ಷರಾದ ಅರವಿಂದ ಜತ್ತಿಯವರು ಸೇರಿದಂತೆ ನಾಡಿನ ನೂರಾರು ಲಿಂಗಾಯತ್ ಮಠಾಧೀಶರು ರ‍್ಯಾಲಿಯಲ್ಲಿ ಸ್ವಯಂ ಪ್ರೇರಣೆಯಿಂದ ಭಾಗವಹಿಸಲಿದ್ದಾರೆ ಎಂದರು. ವೈದಿಕ ಹಿಂದೂ ಧರ್ಮದಲ್ಲಿರುವ ವರ್ಣಾಶ್ರಮ ವ್ಯವಸ್ಥೆ, ಅಸ್ಪೃಶ್ಯತೆ, ಜಾತಿಯತೆ ಹಾಗು ಬಹುದೇವತೋಪಾಸನೆಯನ್ನು ಲಿಂಗಾಯತ ಧರ್ಮ ಒಪ್ಪುವುದಿಲ್ಲ. ಆದ್ದರಿಂದ ರಾಜ್ಯ ಸರಕಾರ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಎಂದು ನಿರ್ಣಯ ತೆಗೆದುಕೊಂಡು ಕೇಂದ್ರ ಸರಕಾರಕ್ಕೆ ಶಿಪಾರಸ್ಸು ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು. ಅಲ್ಲದೇ ಈಗ ನಡೆಸಲಾಗುತ್ತಿರುವ ಜಾತಿಗಣತಿ ತಪ್ಪು. ಈ ಮೂಲಕ ಬೃಹತ್ ಸಮಾಜವನ್ನು ಒಡೆಯಲು ಪ್ರಯತ್ನಿಸಲಾಗುತ್ತಿದೆ ಎಂದರು. 
ಈ ಸಂದರ್ಭದಲ್ಲಿ  ಬಸವದಳದ ಅಧ್ಯಕ್ಷ ವೀರಣ್ಣ ಕೊರ್ಲಹಳ್ಳಿ, ಬಸನಗೌಡ ಪೋಲೀಸ್ ಪಾಟೀಲ್, ಪುಷ್ಪಾ ಹಿರೇಮಠ, ದಾನಪ್ಪ ಶೆಟ್ಟರ್ ಉಪಸ್ಥಿತರಿದ್ದರು. 

Advertisement

0 comments:

Post a Comment

 
Top