PLEASE LOGIN TO KANNADANET.COM FOR REGULAR NEWS-UPDATES

-ಕಿರಣ್, ಗಾಜನೂರು

ಘಟನೆ-1 ಅದು 1927 ರಿಂದ 1932 ರ ವರೆಗಿನ ಕಾಲಾವಧಿ. ಆ ವೇಳೆಗಾಗಲೇ ತಮ್ಮ ಬಹುಪಾಲು ವಿದ್ಯಾಭ್ಯಾಸ ಮುಗಿಸಿ ‘ಮೂಕ ನಾಯಕ’, ‘ಬಹಿಷ್ಕೃತ ಭಾರತ’, ಪತ್ರಿಕೆಗಳನ್ನು ಆರಂಭಿಸಿದ್ದ ಅಂಬೇಡ್ಕರ್, ಕಾಂಗ್ರೆಸ್‌ನ ಸಭೆಯೊಂದರಲ್ಲಿ ಅಧ್ಯಕ್ಷರಾಗಿದ್ದ ವೌಲಾನ ಅಬ್ದುಲ್‌ರವರ ‘‘ಅಸ್ಪಶ್ಯರನ್ನು ಹಿಂದೂ ಮತ್ತು ಮುಸಲ್ಮಾರ ನಡುವೆ ಸಮಾನವಾಗಿ ಹಂಚಿಬಿಡಿ’’ ಎಂಬ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ದೇಶದ ದಲಿತರ ಸಮಸ್ಯೆಗಳನ್ನು ಆಗಿನ ಬ್ರಿಟಿಷ್ ಸರಕಾರದ ಮುಂದೆ ಇಡಲು ‘ಬಹಿಷ್ಕೃತ ಹಿತಕಾರಿಣಿ ಸಭಾ’ ಎಂಬ ಸಂಸ್ಥೆ ಸ್ಥಾಪಿಸಿ ಆ ಮೂಲಕ, ಅಸ್ಪಶ್ಯತೆ ಮತ್ತು ಜಾತಿಯನ್ನು ನಮ್ಮ ಸಮಾಜದಿಂದ ಕಿತ್ತೊಗೆಯಬೇಕೆಂಬ ಅಹಿಂಸಾತ್ಮಕ ಅಂದೋಳನವನ್ನು ರಚಿಸುತ್ತಿದ್ದರು. ಅದರ
ಮೊದಲ ಭಾಗವಾಗಿ ಚೌಡಾರ್ ಕೆರೆ ಪ್ರವೇಶ ಚಳವಳಿಯನ್ನು ಹಮ್ಮಿಕೊಂಡಿದ್ದರು. ಮಹಾರಾಷ್ಟ್ರದ ಮಹಡ್‌ನ ಮುನ್ಸಿಪಾಲಿಟಿ 1923ರಲ್ಲಿಯೇ ಒಂದು ನಿರ್ಣಯ ಮಾಡಿ ಅಲ್ಲಿನ ಚೌಡಾರ್ ಕೆರೆಯ ನೀರನ್ನು ದಲಿತರ ಬಳಕೆಗೆ ಅನುಮೋದಿಸಿದ್ದರೂ ಸಹ ಸವರ್ಣೀಯರ ಭಯದಿಂದ ಅಸ್ಪಶ್ಯರು ಅದನ್ನು ಬಳಸುತ್ತಿರಲಿಲ್ಲ. ಇದರಿಂದ ನೊಂದ ಅಂಬೇಡ್ಕರ್ ಸಾವಿರಾರು ದಲಿತರೊಂದಿಗೆ ಚೌಡಾರ್ ಕೆರೆಯ ನೀರನ್ನು ಕುಡಿಯುವ ಮೂಲಕ ದಲಿತರಿಗೆ ಕೆರೆ ನೀರನ್ನು ಬಳಸಲು ಅನುವು ಮಾಡಿಕೊಡುವ ಪ್ರಯತ್ನ ಮಾಡುತ್ತಾರೆ. ಆದರೆ ಇದರಿಂದ ಕೋಪಗೊಂಡ ಸವರ್ಣೀಯರು ಈ ಚಳವಳಿಗೆ ಆಗಮಿಸಿದ ಜನರನ್ನು ಧಳಿಸುವ ಮೂಲಕ ಹಿಂಸಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ. ಅಸ್ಪಶ್ಯರು ಮುಟ್ಟಿ ಕೆರೆ ಅಪವಿತ್ರವಾಗಿದೆಯೆಂದು ವೈಧಿಕ ವಿಧಿ-ವಿಧಾನಗಳ ಮೂಲಕ ಕೆರೆಯನ್ನು ಶುದ್ಧೀಕರಿಸುತ್ತಾರೆ. ಅಲ್ಲದೆ ಈ ಕೆರೆ ಪರಂಪರಾಗತವಾಗಿ ಸವರ್ಣೀಯರಿಗೆ ಸೇರಿದೆ ಎಂಬ ಅಂಶದ ಮೇಲೆ ನ್ಯಾಯಾಲಯದ ಮೆಟ್ಟಿಲನ್ನು ಹತ್ತುತ್ತಾರೆ ಇದು ಇತಿಹಾಸದಲ್ಲಿ ದಾಖಲಾದ ಪ್ರಮುಖವಾದ ಘಟನೆ.
ಘಟನೆ-2
 ಅದು ಐತಿಹಾಸಿಕ ನಾಸಿಕ್‌ನ ಕಳಾರಾಮನ ದೇವಸ್ಥಾನ ಪ್ರವೇಶ ಹೋರಾಟದ ಸಂಧರ್, ಕಳಾರಾಮನ ದೇವಸ್ಥಾನ ಪ್ರವೇಶಕ್ಕೆ ಎಲ್ಲ ಸಿದ್ಧತೆಗಳಾಗಿವೆ. ತಾವು ಅದರ ನಾಯಕತ್ವ ವಹಿಸಬೇಕು ಎಂದು ಅಂಬೇಡ್ಕರ್ ಅವರನ್ನು ಅವರ ಅನುಯಾಯಿಗಳು ಕೇಳಿಕೊಳ್ಳುತ್ತಾರೆ. ಆಗ ಅಂಬೇಡ್ಕರ್ ಅಸ್ಪಶ್ಯರಿಗೆ ಸಮಾಜದಲ್ಲಿ ಸಮಾಜಿಕ ಮತ್ತು ರಾಜಕೀಯ ಸ್ಥಾನ-ಮಾನ ಗಳಿಸಿಕೊಳ್ಳುವುದು ದೇವಸ್ಥಾನ ಪ್ರವೇಶಕ್ಕಿಂತ ಮುಖ್ಯವಾದುದು ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಅಲ್ಲದೇ ಎಲ್ಲ ಹೋರಾಟಗಳನ್ನು ಕಾನೂನಿನ ಮತ್ತು ಅಹಿಂಸಾತ್ಮಕ ಮಾರ್ಗದ ಪ್ರಕಾರವೇ ನಡೆಸುತ್ತಿದ್ದ ಅಂಬೇಡ್ಕರ್ ಇಲ್ಲಿಯೂ ಕಳಾರಾಮನ ದೇವಸ್ಥಾನ ಪ್ರವೇಶದ ವಿಷಯವಾಗಿ ದೇವಾಲಯದ ಟ್ರಷ್ಟಿಗಳಿಗೆ ನೋಟಿಸ್ ಕಳುಹಿಸುತ್ತಾರೆ. ಅದಕ್ಕೆ ಪ್ರತಿಯಾಗಿ ದೇವಾಲಯದ ಪುರೋಹಿತರುಗಳು, ‘‘ದೇವಾಲಯದ ಟ್ರಷ್ಟಿಗಳು (ನ್ಯಾಸಿಗಳು) ದೇವಾಲಯದ ಮಾಲಕರಲ್ಲ ಅವರಿಗೆ ದೇವಾಲಯದ ಪರಂಪರೆಯ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಅಧಿಕಾರ ಇಲ್ಲ ಬದಲಾಗಿ ಪೂರ್ವಜರು ಈ ಮಂದಿರ ಸ್ಥಾಪಿಸಿದಾಗಲೇ ನಮ್ಮ ಹಿರಿಯರನ್ನು ದೇವಾಲಯದ ಅರ್ಚಕರಾಗಿ ನೇಮಿಸಿದ್ದರು. ಆ ಪರಂಪರೆಯನ್ನು ನಾವು ವಂಶಪಾರಂಪರ್ಯವಾಗಿ ಪ್ರಾಮಾಣಿಕವಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಆದ್ದರಿಂದ ಇಲ್ಲಿನ ಅರ್ಚಕರೇ ದೇವಾಲಯದ ನಿಯಮಗಳ ಕುರಿತಂತೆ ಅಂತಿಮ ನಿರ್ಣಯ ಕೈಗೊಳ್ಳುವ ಶಕ್ತಿಯಾಗಿರುತ್ತಾರೆ. ಒಂದು ವೇಳೆ ದೇವಾಲಯದ ಟ್ರಷ್ಟಿಗಳು ಅಸ್ಪಶ್ಯರಿಗೆ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಿ ದೇವಾಲಯವನ್ನು ಅಪವಿತ್ರಗೊಳಿಸಲು ಮುಂದಾದರೆ ನಾವು ಅದನ್ನು ತೀರ್ವವಾಗಿ ವಿರೋಧಿಸುತ್ತೇವೆ ಏಕೆಂದರೆ ಇದು ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಪರಂಪರೆಯನ್ನು ಉಳಿಸಿಕೊಳ್ಳುವ ಪ್ರಶ್ನೆ’’ ಎಂದು ಪತ್ರಿಕೆಯ ಮೂಲಕ ಉತ್ತರ ನೀಡುತ್ತಾರೆ.
  ಮೇಲಿನ ಎರಡು ಘಟನೆಗಳು ನಡೆದು ಸಮಾರು 75 ವರ್ಷಗಳ ನಂತರ ಕರ್ನಾಟಕದ ಸುಬ್ರಹ್ಮಣ್ಯ ದೇವಾಲಯದಲ್ಲಿ ನಡೆಸಿಕೊಂಡು ಬರುತ್ತಿರುವ ‘ಮಡೆಸ್ನಾನ’ ಎಂಬ ಅಮಾನವೀಯ ಆಚರಣೆಯ ವಿರುದ್ಧ (ಎಂಜಲೆಲೆಯ ಮೇಲೆ ಭಕ್ತರ ಹೋರಳಾಟ) ನಾಗರಿಕ ಸಮಾಜ ಪ್ರತಿಭಟನೆ ನಡೆಸುತ್ತದೆ, ಪರಿಣಾಮ ಈ ಅನಾಗರಿಕ ನಡವಳಿಕೆಯನ್ನು ನಿಷೇಧಿಸುವಂತೆ ಸರಕಾರವನ್ನು ಒತ್ತಾಯಿಸಿದ ಪ್ರಗತಿಪರರನ್ನು ದೇವಾಲಯದ ಎದುರೇ ಸಾರ್ವಜನಿಕವಾಗಿ ಥಳಿಸಲಾಗುತ್ತದೆ. ಮತ್ತು ಹಾಗೆ ಥಳಿಸಿದವರನ್ನು ರೋಪಿಗಳಲ್ಲ ಬದಲಾಗಿ ಸಂಸ್ಕೃತಿ ಉಳಿಸಲು ಹೋರಾಡಿದ ಸೇನಾನಿಗಳು ಎಂದು ಗೌರವಿಸಲಾಗುತ್ತದೆ. ಈ ಘಟನೆಗೆ ಪ್ರತಿಕ್ರಿಯಿಸುವ ಅಂದಿನ ಸರಕಾರ ‘‘ಶತಮಾನಗಳಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಶಾನದಲ್ಲಿ ಈ ಪದ್ದತಿಯನ್ನು ಅನುಸರಿಸಿಕೊಂಡು ಬರಲಾಗುತ್ತಿದೆ. ಇದನ್ನು ಬಲಾತ್ಕಾರವಾಗಿ ನಿಷೇಧಿಸಲು ಸಾಧ್ಯವಾಗಲಾರದು. ಅಗತ್ಯ ಬಿದ್ದರೆ ಆ ಭಾಗದ ಪ್ರಮುಖರ ಜೊತೆ ಚರ್ಚಿಸಿ ಈ ಪದ್ಧತಿಯನ್ನು ಅನುಸರಿಸುತ್ತಿರುವವರ ಮನವೊಲಿಸಲು ಸರಕಾರ ಪ್ರಯತ್ನ ನಡೆಸಲಿದೆ’’ ಎನ್ನುತ್ತದೆ. ಇನ್ನು ಸರಕಾರ ಚರ್ಚಿಸಲು ಹೊರಟಿದ್ದ ಪ್ರಮುಖರಲ್ಲಿ ಒಬ್ಬರು ‘‘ಮಡೆ ಮಡೆ ಸ್ನಾನ ಎಂಬುದು ಆ ಊರಿನ ಸಂಪ್ರದಾಯ. ಅದು ಬೇಕು-ಬೇಡ ಎನ್ನಲು ನಾವ್ಯಾರು?’’ ಎನ್ನುತ್ತಾರೆ. ಇನ್ನೋರ್ವ ಪ್ರಮುಖರು ‘‘ಮಡೆಸ್ನಾನ ನಿಷೇಧಕ್ಕೆ ನನ್ನ ಅಭ್ಯಂತರವೇನು ಇಲ್ಲ. ಏಕೆಂದರೆ ಅದರ ನಿಷೇಧದಿಂದ ಹಿಂದೂ ಧರ್ಮಕ್ಕೆ ಯಾವುದೇ ಅಪಾಯವಿಲ್ಲ’’ ಎಂಬ ಹೇಳಿಕೆ ನೀಡುತ್ತಾರೆ. ಬೇಸತ್ತ ಪ್ರಗತಿಪರರು ನ್ಯಾಯಾಲಯದ ಮೊರೆ ಹೋಗುತ್ತಾರೆ. ನ್ಯಾಯಾಲಯಕ್ಕೆ ನಮ್ಮ ಸರಕಾರ ಮಡೆ ಸ್ನಾನಕ್ಕೆ ಬದಲಾಗಿ ಎಡೆಸ್ನಾನವನ್ನು ಆಚರಿಸಲು ಅವಕಾಶ ನೀಡುವುದಾಗಿ ಹೇಳುತ್ತದೆ. ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ‘‘ಸುಮಾರು 500-600 ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಪದ್ಧತಿಯನ್ನು ಹೀಗೆ ಏಕಾಏಕಿ ನಿಲ್ಲಿಸಲು ಸಾಧ್ಯವಿಲ್ಲ ಬದಲಾಗಿ ಅದರಲ್ಲಿ ಪಾಲ್ಗೊಳ್ಳುತ್ತಿರುವ ಜನರ ಮನವೊಲಿಸಿ’’ ಎಂಬ ಆದೇಶವನ್ನು ನೀಡಿದೆ. ಪರಿಣಾಮ ಈ ಬಾರಿ ಮತ್ತೆ ಮಡೆಸ್ನಾನ ಯಾವುದೇ ತಡೆಯಿಲ್ಲದೆ ನಡೆದಿದೆ. ಜನ ಎಂಜಲೆಲೆಯ ಮೇಲೆ ಹೊರಳಾಡುವ ಪರಂಪರೆ ಮುಂದುವರಿದಿದೆ. ಒಮ್ಮೆ ಸೂಕ್ಷ್ಮವಾಗಿ ಗಮನಿಸಿದರೆ ಭಾರತದ ಸಮಾಜಿಕ ಇತಿಹಾಸದಲ್ಲಿ ನಮೂದಾಗಿದ್ದ ಮೇಲಿನ ಎರಡು ಟನೆಗಳು ಮತ್ತು 75 ವರ್ಷಗಳ ತರುವಾಯ ನಡೆಯುತ್ತಿರುವ ಮಡೆ ಮಡೆ ಸ್ನಾನದ ಕುರಿತಾದ ಚರ್ಚೆಯ ಮಾದರಿಯಲ್ಲಿ ಹಲವಾರು ಸಾಮ್ಯತೆಗಳು ಇರುವುದನ್ನು ಗುರುತಿಸಬಹುದಾಗಿದೆ. ಎರಡೂ ಘಟನೆಗಳಲ್ಲಿ ವೈಧಿಕಶಾಹಿ ಪರವಾದ ಸಮುದಾಯ ಮತ್ತು ಸಂಸ್ಥೆಗಳು ಪರಂಪರೆ, ಆಚರಣೆ ವಂಶಪಾರಂಪರ್ಯ ಇತ್ಯಾದಿಗಳ ಹೆಸರಿನಲ್ಲಿ ವೌಢ್ಯವನ್ನು ಸಮಾಜದ ಮೇಲೆ ಹೇರುತ್ತಿವೆ ಎನ್ನಿಸುತ್ತಿದೆ. ಇವೆಲ್ಲಾ ಘಟನೆಗಳನ್ನು ನೋಡುತ್ತಿದ್ದರೆ 21ನೆ ಶತಮಾನದ ಇಂದಿನ ಭಾರತದ ಸಮಾಜಕ್ಕೂ, ಸ್ವಾತಂತ್ರ್ಯ ಪೂರ್ವದಲ್ಲಿ ಡಾ. ಅಂಬೇಡ್ಕರ್ ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಸಮಾಜಕ್ಕೂ ಯಾವುದೇ ವ್ಯತ್ಯಾಸವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ವೌಢ್ಯಗಳ ಕುರಿತಾಗಿ ನಮ್ಮ ಸಮಾಜದಲ್ಲಿ ಜನರ ವೇಷ ಮಾತು ಬದಲಾಗಿವೆಯೇ ಹೊರತು ಆಲೋಚನೆಗಳಲ್ಲ! ಅಂದು ವೈದಿಕ ಶಕ್ತಿಗಳು ಡಾ. ಅಂಬೇಡ್ಕರ್ ಅವರ ಹೋರಾಟದ ವಿರುದ್ಧ ಹೇಗೆ ವರ್ತಿಸಿದ್ದವೋ ಅದೇ ರೀತಿಯಲ್ಲಿಯೇ ಕೆಲವು ಮನಸ್ಸುಗಳು ಮಡೆಸ್ನಾನದ ವಿಚಾರದಲ್ಲಿ ವರ್ತಿಸುತ್ತಿವೆೆ. ನಮ್ಮ ನಡುವೆ ಇರುವ ಇತಿಹಾಸ (ಸವರ್ಣೀಯರು ಮತ್ತು ಅಸ್ಪಶ್ಯರು)ಮತ್ತು ವರ್ತಮಾನದ (ಮಡೆಸ್ನಾನ ಪರ ಮತ್ತು ವಿರೋಧಿಗಳು) ಚರ್ಚೆಗಳಲ್ಲಿ ಕಾಲದ ವ್ಯತ್ಯಾಸವನ್ನು ಹೊರತುಪಡಿಸಿದರೆ ಬೇರೆ ಯಾವ ವ್ಯತ್ಯಾಸಗಳು ಕಂಡುಬರುತ್ತಿಲ್ಲ. ವಾದಿಸುತ್ತಿರುವವರ ದೇಹ ಮಾತ್ರ ಬದಲಾಗಿದೆ. ಆದರೆ ಲೋಚನೆಗಳು ಹಾಗೆಯೇ ಇವೆ. ಹಾಗೆ ನೋಡುವುದಾದರೆ ಮಾನವ ಇತಿಹಾಸದಿಂದ ಪಾಠ ಕಲಿಯಬೇಕಿದೆ. ಆದರೆ ಭಾರತದ ಸಂದಭರ್ದಲ್ಲಿ ಇತಿಹಾಸವನ್ನೆ ವರ್ತಮಾನವಾಗಿಸುವ ನೆಲೆಯಲ್ಲಿಯೇ ಬಹುಪಾಲು ಚರ್ಚೆಗಳು, ಹೋರಾಟಗಳು ನಡೆಯುತ್ತಿರುವುದು ನಿಜವಾದ ದುರಂತ. 21ನೆ ಶತಮಾನದ ಈ ದಿನಗಳಲ್ಲಿ ಎಂಜಲೆಲೆಯ ಮೇಲೆ ಹೊರಳಾಡುವುದನ್ನು ಪರಂಪರೆ, ಆಚರಣೆ, ಹಿಂದಿನಿಂದ ನಡೆದುಕೊಂಡು ಬಂದಿದೆ ಎಂಬ ಹೆಸರಿನಲ್ಲಿ ಸಮರ್ಥಿಸುವ ಮನಸ್ಸುಗಳ ಕುರಿತು ಕನಿಕರ ಮೂಡುತ್ತಿದೆ. ಜೊತೆಗೆ ಯಾವುದನ್ನು ಪರಂಪರೆ, ಆಚರಣೆಗಳ ಹಿನ್ನೆಲೆಯಲ್ಲಿ ಸಮರ್ಥಿಸಬೇಕು ಯಾವುದನ್ನು ಸಮರ್ಥಿಸಬಾರದು ಎಂಬ ವೈಚಾರಿಕ ಪ್ರಜ್ಞೆ ನಮ್ಮ ಸಮಕಾಲೀನ ಕೆಲವು ಮನಸ್ಸುಗಳಿಂದ ಕಾಣೆಯಾಗಿರುವುದು ನಿಜವಾದ ವೌಢ್ಯ ಅನ್ನಿಸುತ್ತಿದೆ. ನಮ್ಮ ನಡುವಿನ ಈ ಮನಸ್ಸುಗಳು ಬದಲಾಗಲು ಇನ್ನೆಷ್ಟು ಮೂಕ ನಾಯಕರ ಅಗತ್ಯ ನಮ್ಮ ಬಹಿಷ್ಕೃತ ಸಮಾಜಕ್ಕೆ ಇದೆಯೋ? ಎಂಬ ಪ್ರಶ್ನೆಯೂ ನನ್ನನ್ನು ಕಾಡುತ್ತಿದೆ.

ಜೊತೆಗೆ ‘‘ನಮ್ಮ ಸಮಾಜದಲ್ಲಿನ ಸಮಾಜಿಕ ಮತ್ತು ರಾಜಕೀಯ ಸಂಸ್ಥೆಗಳು ರಚನೆಯಾಗಿರುವುದು ಮೇಲ್ವರ್ಗದ ಆಲೋಚನೆಗಳ ಅಡಿಪಾಯದ ಮೇಲೆಯೆ. ಆ ಸಂಸ್ಥೆಗಳನ್ನು ಎಲ್ಲರೊಡಗೂಡಿ ರಚನಾತ್ಮಕವಾಗಿ ಎಲ್ಲಿಯವರೆಗೂ ಬದಲಾಯಿಸಲು ಸಾಧ್ಯವಾಗುವುದಿಲ್ಲವೋ ಅಲ್ಲಿಯವರೆಗೆ ಈ ಮಾದರಿಯ ಮನಸ್ಸುಗಳನ್ನು, ಆಲೋಚನೆಗಳನ್ನು ಬದಲಾಯಿಸಲು ಸಾಧ್ಯವಿಲ್ಲ’’ ಎಂಬ ಆನಂದ್ ತೆಲ್ತುಮ್ಡೆ ಅವರ ಮಾತುಗಳು ನೆನಪಾಗುತ್ತಿದೆ. ಜೊತೆಗೆ ವ್ಯವಸ್ಥೆಯಲ್ಲಿ ರಚನಾತ್ಮಕ ಬದಲಾವಣೆಯ ಕುರಿತು, ಭಾರತದ ಸಂದರ್ಭದಲ್ಲಿ ನಂಬಿಕೆ ಮತ್ತು ಮೂಢನಂಬಿಕೆಗಳ ಕುರಿತು ಒಂದು ಬೌದ್ಧಿಕ ಜಿಜ್ಞಾಸೆ ನಡೆಯಬೇಕಾದ, ನಮ್ಮ ಆಲೋಚನೆಗಳನ್ನು ಪ್ರಬುದ್ಧವಾಗಿ ಬೆಳೆಸ ಬೇಕಾದ ತಳಸಮುದಾಯಗಳನ್ನು ಕುರಿತ ಚಿಂತನಾಧಾರೆಗಳು ಸಣ್ಣ ಸಣ್ಣ ಹೋರಾಟಕ್ಕೆ, ಕ್ಷುಲ್ಲಕ ವಿಚಾರಗಳಿಗೆ ಪ್ರತಿಕ್ರಿಯಾತ್ಮಕವಾಗಿ ನಮ್ಮನ್ನು ನಮ್ಮ ಯುವ ಶಕ್ತಿಯನ್ನು ಸೀಮಿತಗೊಳಿಸುತ್ತಿರುವ ನಮ್ಮ ಸಮಕಾಲೀನ ಹೋರಾಟದ ಮಿತಿಯ ಮನದಟ್ಟಾಗುತ್ತಿದೆ. ಮಡೆಸ್ನಾನದ ಕುರಿತಾದ ಚರ್ಚೆ ಮತ್ತು ಪರಿಣಾಮದಿಂದಲಾದರೂ ನಾವು ಸಾಮಾಜಿಕ ಸಮಸ್ಯೆಗಳನ್ನು ಕೇವಲ ಮೇಲ್ಮಟ್ಟದಲ್ಲಿ ಅರ್ಥಮಾಡಿಕೊಂಡು ಪ್ರತಿರೋಧಿಸದೆ ಅವುಗಳ ಅಳಕ್ಕೆ ಇಳಿದು ಯೋಚಿಸಬೇಕಿದೆ ಮತ್ತು ವಾದಗಳನ್ನು ಕಟ್ಟಬೇಕಿದೆ. ಇಲ್ಲವಾದರೆ ಇತಿಹಾಸದ ಸಾಮಾಜಿಕ ಸ್ಥಿತಿಯನ್ನೆ ವೇಷ ಬದಲಿಸಿ ವರ್ತ ಮಾನವೆಂಬಂತೆ ಬಿಂಬಿಸಿ ಶೋಷಿಸುವ ಮನಸ್ಸುಗಳು ನಮ್ಮ ನಡುವೆ ಗಟ್ಟಿಯಾ ಗುತ್ತಾ ಹೋಗುತ್ತವೆ. ಅವನ್ನು ಗಟ್ಟಿಯಾಗಿ ಪ್ರತಿರೋಧಿಸಬೇಕಾದ ನಾವು ಕೇವಲ ಬೀದಿ ಹೋರಾಟಕ್ಕೆ ಸೀಮಿತವಾಗುತ್ತಾ ಹೋಗುತ್ತೇವೆ... ಸಂಪ್ರದಾಯ, ಆಚರಣೆ, ಪರಂಪರೆಗಳು ವೈಚಾರಿಕತೆಯನ್ನು ಹಾಸ್ಯ ಮಾಡುವಂತೆ ಮುಂದುವರಿಯುತ್ತಲೆ ಹೋಗುತ್ತವೆ.
-varthabharati

Advertisement

0 comments:

Post a Comment

 
Top