PLEASE LOGIN TO KANNADANET.COM FOR REGULAR NEWS-UPDATES

 ದೇಶದಲ್ಲಿ ಅಂತಾರಾಜ್ಯ ನದಿಗಳ ನೀರಿನ ಹಂಚಿಕೆ ನೀತಿ, ಗ್ರಾಮೀಣ ಭಾರತದ ಅಭಿವೃದ್ಧಿಗೆ ನೂತನ ನೀತಿ, ಯುವಕರಿಗೆ ಉದ್ಯೋಗ, ಮಹಿಳಾ ಸಬಲೀಕರಣ, ಆರೋಗ್ಯ ಯೋಜನೆ, ಕೈಗಾರಿಕಾ ನೀತಿ ಸೇರಿದಂತೆ ಹತ್ತು ಹಲವು ಅಂಶಗಳುಳ್ಳ ‘ನಮ್ಮ ಸಂಕಲ್ಪ’ ಎಂಬ 20 ಪುಟಗಳ ಪ್ರಣಾಳಿಕೆಯನ್ನು ಜೆಡಿಎಸ್ ಪಕ್ಷ ಬಿಡುಗಡೆ ಮಾಡಿದೆ.
ಪಕ್ಷದ ಕಚೇರಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ, ಕೇಂದ್ರದಲ್ಲಿ ಯಾವುದೇ ಒಂದು ಪಕ್ಷ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರುವು ದಕ್ಕೆ ಸಾಧ್ಯವಿಲ್ಲ. ಹಾಗಾಗಿ ತಮ್ಮ ಪಕ್ಷದ ಬೆಂಬಲ ಅತ್ಯಗತ್ಯವಿದ್ದು, ಪಕ್ಷದ ಪ್ರಣಾ ಳಿಕೆಯ ಅಂಶಗಳನ್ನು ಅನುಷ್ಠಾನಗೊಳಿ ಸುವವರಿಗೆ ಬೆಂಬಲ ಸೂಚಿಸುವುದಾಗಿ ಹೇಳಿದರು.
 ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಒಂದು ಸ್ಥಾನದಲ್ಲೂ ಗೆಲ್ಲಲು ಬಿಡುವುದಿಲ್ಲ. ರಾಜ್ಯದಲ್ಲಿ ಪಕ್ಷವನ್ನು ತಲೆ ಎತ್ತದಂತೆ ಮಾಡುತ್ತೇನೆ, ಅಲ್ಲದೆ, ಜೆಡಿಎಸ್ ಪಕ್ಷವನ್ನು ಮುಗಿಸುತ್ತೇನೆ ಎಂದು ಹೇಳಿಕೊಂಡು ಕೆಲವರು ತಿರುಗಾಡುತ್ತಿದ್ದಾರೆ. ಆದರೆ, ದೇವೇಗೌಡ ಬದುಕಿರುವವರೆಗೆ ಹಾಗೂ ಪಕ್ಷದ ಲಕ್ಷಾಂತರ ಕಾರ್ಯಕರ್ತರು ಇರುವವರೆಗೂ ಪಕ್ಷವನ್ನು ಮುಗಿಸಲು ಯಾರಿಂದಲೂ ಸಾಧ್ಯವೇ ಇಲ್ಲ ಎಂದ ಅವರು, ಪ್ರಸಕ್ತ ದೇಶದಲ್ಲಿ ನಡೆಯು ತ್ತಿರುವ ಲೋಕಸಭಾ ಚುನಾವಣೆಯ ಬಳಿಕ ನಮ್ಮ ಪಕ್ಷದ ಬೆಂಬಲವಿಲ್ಲದೆ ಯಾರೊಬ್ಬರೂ ಪ್ರಧಾನಿಯಾಗುವುದಕ್ಕೆ ಸಾಧ್ಯವೇ ಇಲ್ಲ ಎಂದು ಭವಿಷ್ಯ ನುಡಿದರು.
 ಮಾಜಿ ಪ್ರಧಾನಿ ದೇವೇಗೌಡರಿಗೆ ಮತ್ತು ಅವರ ಜೆಡಿಎಸ್ ಪಕ್ಷಕ್ಕೆ ಜಾತ್ಯತೀತತೆ ಬಗ್ಗೆ ಯಾವುದೇ ತತ್ವ-ಸಿದ್ಧಾಂತ ಇಲ್ಲ. ಯಾವಾಗ, ಯಾರ ಜತೆ ಬೇಕಾದರೂ ಕೈ ಜೋಡಿಸುತ್ತಾರೆ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿಯವರು ಟೀಕೆ ಮಾಡಿದ್ದಾರೆ. ಜಾತ್ಯತೀತದ ಬಗ್ಗೆ ಅವರಿಂದ ಹೇಳಿಸಿಕೊಳ್ಳುವ ಅಗತ್ಯ ನಮಗಿಲ್ಲ ಎಂದು ದೇವೇಗೌಡ ಇದೇ ವೇಳೆ ಕಿಡಿಗಾರಿದರು.
ಬೆಂಗಳೂರಿನ ಐಟಿ ಅಭಿವೃದ್ಧಿಗೆ ನಾವೇ ಕಾರಣ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಹೇಳಿಕೊಳ್ಳುತ್ತಿದ್ದಾರೆ. ಆದರೆ, ನಾನು ದೇಶದ ಪ್ರಧಾನಿಯಾಗಿದ್ಧ ಸಂದರ್ಭದಲ್ಲಿ ಐಟಿ ಕಂಪೆನಿ ಸ್ಥಾಪನೆಗೆ ತೆರಿಗೆ ವಿನಾಯಿತಿ ಕೊಟ್ಟಿದ್ದೆ. ಅಲ್ಲದೆ, 25 ಲಕ್ಷ ಉದ್ಯೋಗ ಸೃಷ್ಟಿ ಮಾಡುವುದಕ್ಕೆ ಕಾರಣನಾಗಿದ್ದೆ ಎಂದು ದೇವೇಗೌಡರು ಇದೇ ವೇಳೆ ತಿಳಿಸಿದರು.
ಕಾಂಗ್ರೆಸ್ ನಾಯಕರು ಹಾಸನದಲ್ಲಿ ಪ್ರಚಾರ ನಡೆಸಿ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಮಾಜಿ ಪ್ರಧಾನಿ ಎಂಬುದು ಬಿಡಿ, ನನ್ನ ವಯಸ್ಸಿಗಾದರೂ ಗೌರವ ಬೇಡವೇ ಎಂದು ಪ್ರಶ್ನಿಸಿದರು.
 ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇನೆ. ಬಡವರಿಗೆ ಅನ್ನ ಭಾಗ್ಯ, ಕ್ಷೀರ ಭಾಗ್ಯ ಪರಿಚಯಿಸಿದ್ದು ನಾನೇ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುವುದರಲ್ಲಿ ಅರ್ಥವೇ ಇಲ್ಲ ಎಂದು ಅವರು ಹೇಳಿದರು.
ಪ್ರಮುಖ ಅಂಶಗಳು
ಮಹಿಳಾ ಸಬಲೀಕರಣ, ಯುವಕರಿಗೆ ಮತ್ತು ಮಹಿಳೆಯರಿಗೆ ಉದ್ಯೋಗ, ಭ್ರಷ್ಟಾಚಾರ ನಿರ್ಮೂಲನೆ, ನೂತನ ಕೃಷಿ ನೀತಿ, ಜಲ-ನೀರಾವರಿ ನೀತಿ, ಅಂತಾರಾಜ್ಯ ನದಿಗಳ ನೀರು ಹಂಚಿಕೆ ನೀತಿ, ಗ್ರಾಮೀಣ ಭಾರತಕ್ಕೆ ಹೊಸ ನೀತಿ, ಟ್ಯಾಕ್ಸಿ ಮತ್ತು ಆಟೊ ಚಾಲಕರಿಗೆ ಉದ್ಯೋಗ ನೀತಿ.
ಆರೋಗ್ಯ ಯೋಜನೆ, ಕೈಗಾರಿಕಾ ನೀತಿ, ವಾಣಿಜ್ಯ ನೀತಿ, ಚುನಾವಣಾ ಸುಧಾರಣೆಗಳು, ಕಾರ್ಮಿಕ ನೀತಿ, ರಕ್ಷಣಾ ನೀತಿ, ಸಾರ್ವಜನಿಕ ವಿತರಣ ವ್ಯವಸ್ಥೆ, ಪರಿಸರ ಸಂರಕ್ಷಣೆ, ವಿದ್ಯಾ ಮತ್ತು ವೈಜ್ಞಾನಿಕ ನೀತಿ, ಅಲ್ಪ ಸಂಖ್ಯಾತ ಕೋಮುಗಳ ಬಗ್ಗೆ ನೀತಿ ಹಾಗೂ ಐಟಿ. ಬಿಟಿ ವಲಯಕ್ಕೆ ನೀತಿ ಇತ್ಯಾದಿ.

Advertisement

0 comments:

Post a Comment

 
Top