PLEASE LOGIN TO KANNADANET.COM FOR REGULAR NEWS-UPDATES



ಕತ್ತಿ ಹಿಡಿದವನ ಕಣ್ಣಲ್ಲಿಯ ಉನ್ಮಾದ
ಬಾಂಬು ಹಿಡಿದವನ ಕಣ್ಣಲ್ಲಿಯ ಬೆಂಕಿ
ಕಂಡ ದೇವರು ಅಡಗಿ ಕುಳಿತ

ಎಷ್ಟೊತ್ತು ಅಡಗಿ ಕುಳಿತಾನು
ಹಸಿವು ತಡೆಯಲಾಗದೆ ಹೊರಬಂದ
ಧಗಧಗ  ಉರಿಯುತ್ತಿರುವ ಊರು
ಚೆಲ್ಲಾಪಿಲ್ಲಿಯಾಗಿ ಬಿದ್ದ ಚಪ್ಪಲಿಗಳು
ಸುಟ್ಟ ಸೀದ ವಾಸನೆ ಕೇಕೆ ಆಕ್ರಂದನ
ಕಿವಿ ಮೂಗು ಮುಚ್ಚಿಕೊಂಡ 

ಹರಹರ ಎನ್ನುತ್ತಾ ಬಂದವರ ಕಂಡು ನಡುಗಿದ,
ಕೆಳಗೆ ಬಿದ್ದ ಹಣೆಗೆ ಪೆಟ್ಟು ತಿಂದ
ಹಣೆಯ ಮೇಲಿನ ಕೆಂಪು ಕಂಡು
ಗುಂಪು ಮುಂದೆ ಸಾಗಿತು

ಹಾರಿಬಂದ ಬೂದಿ ಕಣ್ಣು ,ಮುಖ ಮುಚ್ಚಿತು
ಒರೆಸಿಕೊಳ್ಳಲು ಏನೂ ಸಿಗಲಿಲ್ಲ,
ತಡಕಾಡಿದ ಕೆಳಗೆ ಬಿದ್ದ ಕರ್ಚಿಪು ಎತ್ತಿಕೊಂಡು ಒರೆಸಿಕೊಂಡ 
ರಕ್ತ ಜಿಗುತ್ತಿದ್ದ ಹಣೆಗೆ ಕಟ್ಟಿಕೊಂಡ
ಅಲ್ಲಾಹನಿಗೆ ಜೈ ಜೈ ಎನ್ನುತ್ತಾ ಬಂದ ಗುಂಪೊಂದು
ಇವನ ಹಸಿರು ಕರ್ಚಿಪು ಕಂಡು ಮುಂದೆ ಸಾಗಿತು

ಹಾಗೂ ಹೀಗೂ ನಡೆಯುತ್ತ ಎಡವುತ್ತ ಸಾಗಿದವನಿಗೆ
ಪೋಲೀಸ್ ಠಾಣೆ ಕಂಡಿತು ಒಳಹೊಕ್ಕ, 
ಹಿರಿಯ ಅಧಿಕಾರಿಯ ಎದುರಿಗೆ ಪತ್ರಕರ್ತರ ತಂಡ,
ಕ್ಯಾಮೆರಾ ಪ್ಲಾಶ್ ಬೆಳಕು ಕ್ಲಿಕ್ ಸದ್ದು
ಅಧಿಕಾರಿ ಹೇಳುತ್ತಿದ್ದ  
ಸತ್ತವರಲ್ಲಿ ಹಿಂದೂಗಳು ಇಷ್ಟು
ಮುಸ್ಲಿಂರು ಇಷ್ಟು, ದಲಿತರು... ಮಕ್ಕಳು ಇಷ್ಟು ಜನ...

ಕ್ಷೀಣ ಸ್ವರದಲ್ಲಿಯೇ ದೇವರು ಬಡಬಡಿಸಿದ
ಮನುಷ್ಯರೆಷ್ಟು ? ಮನುಷ್ಯರೆಷ್ಟು ?


- ಸಿರಾಜ್ ಬಿಸರಳ್ಳಿ
- Photo  : Internet

Advertisement

0 comments:

Post a Comment

 
Top