ಮುನಿರಾಬಾದ್-ಮೆಹಬೂಬ್ ನಗರ ರೈಲ್ವೆ ಯೋಜನೆಗೆ ೧೦೦ ಕೋಟಿ ರೂ. ಹೆಚ್ಚುವರಿ ಅನುದಾನ ಒದಗಿಸುವುದೂ, ಸೇರಿದಂತೆ ವಿವಿಧ ಸೌಲಭ್ಯಗಳನ್ನ ಒದಗಿಸುವಂತೆ ಕೋರಿ ಸಂಸದ ಶಿವರಾಮಗೌಡ ಅವರು ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ್ದಾರೆ.
ನವದೆಹಲಿಯಲ್ಲಿನ ಕೇಂದ್ರ ರೈಲ್ವೆ ಸಚಿವರ ಕಚೇರಿಗೆ ಭೇಟಿ ನೀಡಿ ಮನವಿ ಪತ್ರ ಸಲ್ಲಿಸಿರುವ ಸಂಸದ ಶಿವರಾಮಗೌಡ ಅವರು, ಮುನಿರಾಬಾದ್-ಮೆಹಬೂಬ್ ನಗರ ರೈಲ್ವೆ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ೧೦೦ ಕೋಟಿ ರೂ. ಹೆಚ್ಚುವರಿ ಅನುದಾನ ಒದಗಿಸಬೇಕು, ಬಳ್ಳಾರಿಯಿಂದ ಸಿರುಗುಪ್ಪ ಮಾರ್ಗವಾಗಿ ಮುನಿರಾಬಾದ್-ಮೆಹಬೂಬ್ನಗರ ಮಾರ್ಗಕ್ಕೆ ಸಿಂಧನೂರು ಹತ್ತಿರ ಸಂಪರ್ಕಿಸಲು ಹೊಸ ಮಾರ್ಗ ಘೋಷಣೆ ಮಾಡಬೇಕು. ಅಮರಾವತಿ ಎಕ್ಸ್ಪ್ರೆಸ್ ರೈಲನ್ನು ಹುಬ್ಬಳ್ಳಿಯಿಂದ-ವಿಜಯವಾಡಕ್ಕೆ ಪ್ರತಿ ದಿನ ಓಡಿಸಬೇಕು ಅಲ್ಲದೆ, ಈ ರೈಲಿಗೆ ಹೆಚ್ಚುವರಿ ಮೂರು ಬೋಗಿಗಳನ್ನು ಅಳವಡಿಸಬೇಕು. ಭಾಗ್ಯನಗರ ಎಲ್.ಸಿ. ಗೇಟ್ ಸಂಖ್ಯೆ ೬೨ ಮತ್ತು ಕಿನ್ನಾಳ ರೈಲ್ವೆ ಗೇಟ್ ೬೪ ರಲ್ಲಿ ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅನುದಾನ ಮಂಜೂಆತಿ ನೀಡಿದ್ದು, ರೈಲ್ವೆ ಇಲಾಖೆ ಮತ್ತು ರಾಜ್ಯ ಸರ್ಕಾರದ ಮಧ್ಯೆ ಉದ್ಭವಿಸಿರುವ ತಾಂತ್ರಿಕ ಸಮಸ್ಯೆಯನ್ನು ಕೂಡಲೆ ನಿವಾರಿಸಿ, ಕಾಮಗಾರಿಯನ್ನು ತ್ವರಿತವಾಗಿ ಪ್ರಾರಂಭಿಸಬೇಕು. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಕೊಪ್ಪಳ, ಬಳ್ಳಾರಿ ಮಾರ್ಗವಾಗಿ, ಹಗಲು ಸಮಯದಲ್ಲಿ ನೂತನವಾಗಿ ಇಂಟರ್ಸಿಟಿ ರೈಲು ಪ್ರಾರಂಭಿಸಬೇಕು. ಮುಂಬೈನಿಂದ ಚೆನ್ನೈಗೆ ಮತ್ತು ನವದೆಹಲಿಗೆ ಹೊಸ ರೈಲು ಅಥವಾ ಕರ್ನಾಟಕ ಎಕ್ಸ್ಪ್ರೆಸ್ ಇಲ್ಲವೆ ಗರೀಬ್ ರಥ ರೈಲುಗಳನ್ನು ಬಳ್ಳಾರಿ ಮತ್ತು ಕೊಪ್ಪಳ ಮಾರ್ಗವಾಗಿ ಮಾರ್ಗ ಬದಲಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಬಸವ ಎಕ್ಸ್ಪ್ರೆಸ್ ರೈಲು ಗಾಡಿಯನ್ನು ಕೊಪ್ಪಳ-ಹೊಸಪೇಟೆ-ಬಳ್ಳಾರಿ ಮುಖಾಂತರ ಚಲಿಸಲು ಕ್ರಮ ಜರುಗಿಸಬೇಕು. ಹೊಸಪೇಟೆ-ಬೆಂಗಳೂರು ಫಾಸ್ಟ್ ಪ್ಯಾಸೆಂಜರ್ ರೈಲಿಗೆ ಹೆಚ್ಚುವರಿ ಕೋಚ್ ಅಳವಡಿಸಬೇಕು ಹಾಗೂ ಹಂಪಿ ಎಕ್ಸ್ಪ್ರೆಸ್ ರೈಲಿಗೆ ಕನಿಷ್ಟ ೩ ಎ.ಸಿ. ಕೋಚ್ಗಳನ್ನು ಹೆಚ್ಚುವರಿಯಾಗಿ ಜೋಡಿಸಬೇಕು. ಈ ಎಲ್ಲ ಬೇಡಿಕೆಗಳನ್ನು ಪರಿಗಣಿಸಿ, ಸೂಕ್ತ ಆದೇಶ ಮಾಡಬೇಕು ಎಂದು ಸಂಸದರು ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖಗೆ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ್ದಾರೆ ಎಂದು ಸಂಸದರ ಕಚೇರಿ ತಿಳಿಸಿದೆ.
0 comments:
Post a Comment