PLEASE LOGIN TO KANNADANET.COM FOR REGULAR NEWS-UPDATES

 ಸರ್ಕಾರಿ ನೌಕರರ ಹಿತಕಾಯಲು ಹಿರಿಯರ ಮಾರ್ಗದರ್ಶನ ಪಡೆದು, ಸರ್ವರೊಂದಿಗೆ ಜೊತೆಗೂಡಿ ನೌಕರರ ಸಂಘಟನೆಯನ್ನು ಬಲಪಡಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ನಾಗರಾಜ ಜುಮ್ಮನ್ನವರ್ ಅವರು ಹೇಳಿದರು.
  ಕೊಪ್ಪಳ ನಗರದ ನೌಕರರ ಭವನದಲ್ಲಿ ಏರ್ಪಡಿಸಲಾಗಿದ್ದ ನೌಕರರ ಸಂಘದ ಜಿಲ್ಲಾ ಘಟಕದ ನೂತನ ಅಧ್ಯಕ್ಷರು, ರಾಜ್ಯ ಪರಿಷತ್ ಸದಸ್ಯ, ಖಜಾಂಚಿಗಳ ಪದಗ್ರಹಣ ಸಮಾರಂಭದಲ್ಲಿ, ಭಾಗವಹಿಸಿ ಅವರು ಮಾತನಾಡಿದರು.
 

ರ್ಕಾರಿ ನೌಕರರು ಸಾರ್ವಜನಿಕ ಸೇವೆ ಬದ್ಧರಾಗಬೇಕಾಗಿದ್ದು, ಕರ್ತವ್ಯಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ.  ನೌಕರರಲ್ಲಿನ ಭಿನ್ನಾಭಿಪ್ರಾಯಗಳು ಚುನಾವಣೆಗಷ್ಟೇ ಸೀಮಿತವಾಗಿದ್ದು, ಚುನಾವಣೆಯ ನಂತರ ಎಲ್ಲ ನೌಕರರು ನೌಕರರ ಸಂಘದ ಒಂದು ಭಾಗವೇ ಆಗಿರುತ್ತಾರೆ.  ನೂತನ ಜಿಲ್ಲೆಯಾಗಿರುವ ಕೊಪ್ಪಳದಲ್ಲಿ ಸರ್ಕಾರಿ ನೌಕರರಿಗೆ ಸಮರ್ಪಕ ವಸತಿ ವ್ಯವಸ್ಥೆ ಇಲ್ಲದಿರುವುದು, ಕೇಂದ್ರ ಸ್ಥಾನದಲ್ಲಿ ಅಧಿಕಾರಿ, ಸಿಬ್ಬಂದಿಗಳು ಕಡ್ಡಾಯವಾಗಿ ವಾಸಿಸಲು ಪ್ರಮುಖ ಸಮಸ್ಯೆಯಾಗಿದೆ.  ಈ ಸಮಸ್ಯೆಯನ್ನು ಪ್ರಥಮಾಧ್ಯತೆ ಮೇರೆಗೆ ಬಗೆಹರಿಸಬೇಕಾಗಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ, ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿದೆ.  ಸರ್ಕಾರಿ ನೌಕರರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಬೇಕಾಗಿದ್ದು, ಇಲ್ಲವಾದಲ್ಲಿ, ನೌಕರರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣದಲ್ಲಿ ನೌಕರರನ್ನು ಸಮರ್ಥಿಸಿಕೊಳ್ಳಲು ಕಷ್ಟವನ್ನು ಎದುರಿಸಬೇಕಾಗುತ್ತದೆ.  ನೌಕರರ ಹಿತಾಸಕ್ತಿಗೆ ಧಕ್ಕೆಯಾಗುವ ಪ್ರಸಂಗ ಬಂದಲ್ಲಿ, ಯಾವುದೇ ಹೋರಾಟಕ್ಕೆ ನಾವು ಸಿದ್ಧರಾಗಬೇಕಾಗುತ್ತದೆ.  ಶಿಕ್ಷಕರಿಗೆ ಸಮಯಕ್ಕೆ ಸರಿಯಾಗಿ ವೇತನ ಸಿಗದೇ ಇರುವುದು ಸಹ ಅನೇಕ ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಯಾಗಿ ಉಳಿದಿದೆ.  ಇದಕ್ಕೂ ಸಹ ಪರಿಹಾರ ಕಂಡುಕೊಳ್ಳಲು ಶ್ರಮಿಸಲಾಗುವುದು.  ಎಲ್ಲ ನೌಕರ ಬಾಂಧವರನ್ನು ಜೊತೆಯಾಗಿಸಿಕೊಂಡು, ನೌಕರರ ಸಂಘಟನೆಯನ್ನು ಬಲಪಡಿಸಲು, ಹಾಗೂ ಹಿಂದಿನ ಅವಧಿಯಲ್ಲಿನ ಉತ್ತಮ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ನೂತನ ಅಧ್ಯಕ್ಷ ನಾಗರಾಜ ಜುಮ್ಮನ್ನವರ್ ಅವರು ಭರವಸೆ ನೀಡಿದರು.
  ರಾಜ್ಯ ಪರಿಷತ್‌ನ ನೂತನ ಸದಸ್ಯರಾಗಿ ಪದಗ್ರಹಣ ಮಾಡಿದ ಧನಂಜಯ ಮಾಲಗಿತ್ತಿ, ನೂತನ ಖಜಾಂಚಿಯಾಗಿ ಅಧಿಕಾರ ವಹಿಸಿಕೊಂಡ ಸುಶಿಲೇಂದ್ರರಾವ್ ಅವರು ಈ ಸಂದರ್ಭದಲ್ಲಿ ಮಾತನಾಡಿದರು.  ಸಮಾರಂಭದಲ್ಲಿ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಎನ್.ವೈ. ಕಾಡಗಿ ಸೇರಿದಂತೆ ಜಿಲ್ಲಾ ಘಟಕದ ನೂತನ ಕಾರ್ಯಕಾರಿ ಸಮಿತಿ ಸದಸ್ಯರುಗಳು, ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿದ್ದರು.


ಸ್ವಾತಂತ್ರ್ಯ ದಿನಾಚರಣೆ
ಕೊಪ್ಪಳ :  ಕೊಪ್ಪಳ ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಛೇರಿಯಲ್ಲಿ ನೂತನ ಜಿಲ್ಲಾಧ್ಯಕ್ಷರಾದ ನಾಗರಾಜ ಜುಮ್ಮನ್ನನವರ ರವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ರಾಜ್ಯಪರಿಷತ್ ಸದಸ್ಯರಾದ ಧನಂಜಯ ಮಾಲಗತ್ತಿ , ಖಜಾಂಚಿ ಸುಶಿಲೇಂದ್ರ ದೇಶಪಾಂಡೆ , ಹಾಗೂ ಸಂಘದ ನಿರ್ದೇಶಕರು ಹಾಜರಿದ್ದರು.

Advertisement

0 comments:

Post a Comment

 
Top