PLEASE LOGIN TO KANNADANET.COM FOR REGULAR NEWS-UPDATES


ಮೈಸೂರು:  ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆಯಲಿರುವ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಡಾ.ಸಿ. ಪಿ.ಕೃಷ್ಣಕುಮಾರ್ (ಸಿಪಿಕೆ) ಅವರಿಗೆ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತು ಅಧಿಕೃತ ಆಮಂತ್ರಣ ನೀಡಿತು.

ನಗರದ ಪಡುವಾರಹಳ್ಳಿಯಲ್ಲಿರುವ ಸಿಪಿಕೆ ಅವರ ನಿವಾಸದಲ್ಲಿ ಸಮ್ಮೇಳನದ ಕಾರ್ಯಾಧ್ಯಕ್ಷ ಹಾಗೂ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಮತ್ತು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಆರ್.ಕೆ.ನಲ್ಲೂರುಪ್ರಸಾದ್ ಅವರು ಸಿಪಿಕೆಯವರನ್ನು ಸನ್ಮಾನಿಸಿ, ಆಮಂತ್ರಣ ಪತ್ರಿಕೆ ನೀಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು, `ತಾಲ್ಲೂಕು ಕೇಂದ್ರವಾದ ಗಂಗಾವತಿಯಲ್ಲಿ ಸಮ್ಮೇಳನದ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಡಿಸೆಂಬರ್ 9 ರಿಂದ 11ರ ವರೆಗೆ ನಡೆಯಲಿರುವ ಸಮ್ಮೇಳನಕ್ಕೆ ಆಗಮಿಸುವವರ ವಸತಿಗೆ ಶಾಲೆಗಳು, ವಸತಿಗೃಹಗಳನ್ನು ಸಜ್ಜುಗೊಳಿಸಲಾಗಿದೆ. ಊಟದ ವ್ಯವಸ್ಥೆಯನ್ನೂ ವಿಶೇಷವಾಗಿ ಮಾಡಲಾಗುವುದು` ಎಂದು ಹೇಳಿದರು.

ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಶೇಖರಗೌಡ ಮಾಲೀಪಾಟೀಲ ಮಾತನಾಡಿ, `ವಸತಿ ವ್ಯವಸ್ಥೆಗಾಗಿ ಮನೆ ಮನೆ ಅತಿಥಿ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಊರಿನಲ್ಲಿ ಒಟ್ಟು 500 ಮನೆಗಳನ್ನು ಗುರುತಿಸಲಾಗಿದೆ. 

ಪ್ರತಿಯೊಂದು ಮನೆಯಲ್ಲಿ ಇಬ್ಬರು ಅತಿಥಿಗಳಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುವುದು. ಒಟ್ಟು 1000 ಜನರಿಗೆ ವಸತಿ ಕಲ್ಪಿಸಲಾಗುತ್ತಿದೆ. ಜೊತೆಗೆ ಸಮುದಾಯ ಭವನಗಳು, ಶಾಲೆಗಳು ಮತ್ತು ವಸತಿ ಗೃಹಗಳು ಇವೆ. ಆತಿಥ್ಯಕ್ಕೆ ಹೆಸರಾದ ಗಂಗಾವತಿ ತನ್ನ ಘನತೆಗೆ ತಕ್ಕಂತೆ ಸಮ್ಮೇಳನವನ್ನು ಆಯೋಜಿಸಲಿದೆ` ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. 

ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ,  ಕಾರ್ಯಕಾರಿ ಸಮಿತಿ ಸದಸ್ಯ ಸತೀಶಗೌಡ, ರಾಜಶೇಖರ ಅಂಗಡಿ, ಮೈಸೂರು ಜಿಲ್ಲಾ ಘಟಕದ ಮಡ್ಡೀಕೆರೆ ಗೋಪಾಲ್ ಇತರರು ಹಾಜರಿದ್ದರು.

Advertisement

0 comments:

Post a Comment

 
Top