ಕೊಪ್ಪಳ ನಗರದ ಶಿವಶಾಂತವೀರ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ವೇಷಭೂಷಣ ಸ್ಪರ್ಧೆಯಲ್ಲಿ ಚಿಣ್ಣರು ನಾನಾ ವೇಷಗಳನ್ನು ಧರಿಸುವ ಮೂಲಕ ಗಮನ ಸೆಳೆದರು.
ಶಾಲೆಯ 1 ರಿಂದ 5ನೇ ತರಗತಿಯ ಮಕ್ಕಳಿಗಾಗಿ ಏರ್ಪಡಿಸಲಾಗಿದ್ದ ವೇಷಭೂಷಣ ಸ್ಪರ್ಧೆಯಲ್ಲಿ ಕೆಲ ಚಿಣ್ಣರು ಶಿವ, ನಾರದ, ಶಕುಂತಲೆ, ಕೃಷ್ಣ, ಮಾರುತಿ, ಏಸುಕ್ರಿಸ್ತ ದಂತಹ ಪೌರಾಣಿಕ ಪಾತ್ರಗಳ ವೇಷ ಧರಿಸಿದರೆ, ಕೆಲವು ಮಕ್ಕಳು ಚಿರತೆ, ಕರಡಿ, ಜಿಂಕೆ ಮುಂತಾದ ಪ್ರಾಣಿಗಳ ವೇಷ ಧರಿಸಿದ್ದಲ್ಲದೆ, ಕಾಡು ಮತ್ತು ಪರಿಸರ ಸಂರಕ್ಷಿಸಿ ಎನ್ನುವ ಸಂದೇಶವನ್ನು ಸಾರಿ, ಗಮನ ಸೆಳೆದರು. 6 ರಿಂದ 9 ನೇ ತರಗತಿಯ ಮಕ್ಕಳಿಗಾಗಿ ಏರ್ಪಡಿಸಲಾಗಿದ್ದ ಸ್ಪರ್ಧೆಯಲ್ಲಿ ಕೆಲ ಮಕ್ಕಳು ರೈತ, ಹೂವಾಡಗಿತ್ತಿ, ಗಿಳಿ ಶಾಸ್ತ್ರ ಹೇಳುವವ ಸೇರಿದಂತೆ ವಿವಿಧ ರಾಜ್ಯಗಳ ವಸ್ತ್ರ ವಿನ್ಯಾಸದ ಧಿರಿಸುಗಳನ್ನು ಧರಿಸಿ, ಸ್ಪರ್ಧೆಯನ್ನು ಆಕರ್ಷಕಗೊಳಿಸಿದರು. ಶಿವಶಾಂತವೀರ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯಿನಿ ಮಿಸ್ ರೋಸ್ ಮೇರಿ, ಶಾಲಾ ಆಡಳಿತಾಧಿಕಾರಿ ವಿಜಯಾ ಹಿರೇಮಠ ಸೇರಿದಂತೆ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು. ಗವಿಸಿದ್ದೇಶ್ವರ ಮಹಾವಿದ್ಯಾಲಯದ ಉಪನ್ಯಾಸಕರುಗಳಾದ ಶೈಲಜಾ ಹಿರೇಮಠ ಮತ್ತು ಆಯಿಷಾ ತಳಕಲ್ ಅವರು ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.
0 comments:
Post a Comment