PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಆ.೦೪ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ನಾರಾಯಣ ಅವರು ಆಗಸ್ಟ್.೦೬ ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
     ಆಯೋಗದ ಅಧ್ಯಕ್ಷರು ಅಂದು ಮಧ್ಯಾಹ್ನ ಕೊಪ್ಪಳ ನಗರಕ್ಕೆ ಆಗಮಿಸಲಿದ್ದು, ಮಧ್ಯಾಹ್ನ ೩-೩೦ ಗಂಟೆಗೆ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗದಲ್ಲಿ  ನಡೆಯಲಿರುವ ಪೌರಕಾರ್ಮಿಕರ ಕುಂದುಕೊರತೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳುವರು. ಸಭೆಯಲ್ಲಿ ಕಾರ್ಮಿಕ ಕಾಯ್ದೆಯಂತೆ ಕನಿಷ್ಠ ವೇತನ ಜಾರಿ, ಪಿ.ಎಫ್ ಮತ್ತು ಇ.ಪಿ.ಎಫ್ ಹಣದ ಬಗ್ಗೆ, ಸಫಾಯಿ ಕರ್ಮಚಾರಿಗಳಿಗೆ ಗುರುತಿನ ಚೀಟಿ, ಪರಿಕರಗಳನ್ನು ಒದಗಿಸುವುದು, ಆರೋಗ್ಯ ತಪಾಸಣೆ, ಪುನರ್ವಸತಿ ಯೋಜನೆ ಅನುಷ್ಠಾನ ಮತ್ತು ಪರಿಶೀಲನೆ, ಪಿಇಎಮ್‌ಎಸ್ ಮತ್ತು ಆರ್ ಆಕ್ಟ್ ೨೦೧೩ ರ ಅನುಷ್ಠಾನ, ಕರ್ಮಚಾರಿಗಳಿಗೆ ಪರಿಹಾರ ಧನ ಇತ್ಯಾದಿ ವಿಷಯಗಳ ಕುರಿತು  ಸಭೆಯಲ್ಲಿ ಚರ್ಚೆ ನಡೆಯಲಿದೆ.  ಆಯೋಗದ ಅಧ್ಯಕ್ಷರು ಅದೇ ದಿನ ಸಂಜೆ ಬಳ್ಳಾರಿಗೆ ಪ್ರಯಾಣ ಬೆಳೆಸುವರು ಎಂದು ಅಧ್ಯಕ್ಷರ ಕಾರ್ಯದರ್ಶಿ ತಿಳಿಸಿದ್ದಾರೆ. 
ಆಗಸ್ಟ್ ತಿಂಗಳ ಪಡಿತರ ಧಾನ್ಯ ಬಿಡುಗಡೆ
ಕೊಪ್ಪಳ, ಆ.೦೪ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ  ಇಲಾಖೆಯು ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದ ಪಡಿತರದಾರರಿಗೆ ಆಗಸ್ಟ್ ತಿಂಗಳಿಗಾಗಿ ಆಹಾರಧಾನ್ಯ, ಸಕ್ಕರೆ, ಸೀಮೆಎಣ್ಣೆ, ತಾಳೆ ಎಣ್ಣೆ ಮತ್ತು ಆಯೋಡಿನ್‌ಯುಕ್ತ ಉಪ್ಪು  ಬಿಡುಗಡೆ ಮಾಡಿದೆ.
     ಕೊಪ್ಪಳ ಜಿಲ್ಲೆಯ ಅಂತ್ಯೋದಯ ಕಾರ್ಡುದಾರರಿಗೆ ಉಚಿತವಾಗಿ ೨೯ ಕೆ.ಜಿ ಅಕ್ಕಿ ಮತ್ತು ೦೬ ಕೆ.ಜಿ ಗೋಧಿ, ಕೆ.ಜಿ ಗೆ ೧೩.೫೦ ರೂ. ನಂತೆ ೦೧ ಕೆ.ಜಿ ಸಕ್ಕರೆ, ಲೀಟರ್‌ಗೆ ೨೫ ರೂ.ಗಳಂತೆ ೦೧ ಲೀ ತಾಳೆ ಎಣ್ಣೆ ಹಾಗೂ ಕೆ.ಜಿ ಗೆ ೦೨ ರೂ.ಗಳಂತೆ ೦೧.ಕೆ.ಜಿ ಉಪ್ಪು ಬಿಡುಗಡೆ ಮಾಡಲಾಗಿದೆ. ಬಿಪಿಎಲ್ ಪಡಿತರದಾರರಿಗೆ ಯಾವುದೇ ಪರಿಮಿತಿಯಿಲ್ಲದೇ ಪ್ರತಿ ಸದಸ್ಯರಿಗೆ ಉಚಿತವಾಗಿ ೦೩ ಕೆ.ಜಿ ಅಕ್ಕಿ ಮತ್ತು ೦೨ ಕೆ.ಜಿ ಗೋಧಿ, ಕೆ.ಜಿ ಗೆ ೧೩.೫೦ ರೂ. ನಂತೆ ೦೧ ಕೆ.ಜಿ ಸಕ್ಕರೆ, ಲೀಟರ್‌ಗೆ ೨೫ ರೂ.ಗಳಂತೆ ೦೧.ಲೀ ತಾಳೆ ಎಣ್ಣೆ ಹಾಗೂ ಕೆ.ಜಿ ಗೆ ೦೨ ರೂ.ಗಳಂತೆ ೦೧ ಕೆ.ಜಿ ಉಪ್ಪು ಬಿಡುಗಡೆ ಮಾಡಲಾಗಿದೆ. ಎಪಿಎಲ್ ಕಾರ್ಡುದಾರರಿಗೆ ಕೆ.ಜಿ ಗೆ ೧೫ ರೂ.ನಂತೆ ಏಕ ಸದಸ್ಯ ೦೩ ಕೆ.ಜಿ, ದ್ವಿ ಮತ್ತು ಹೆಚ್ಚಿನ ಸಂಖ್ಯೆ ಸದಸ್ಯರಿಗೆ ೦೫ ಕೆ.ಜಿ ಅಕ್ಕಿ ಮತ್ತು ಕೆ.ಜಿಗೆ ೧೦ ರೂ.ನಂತೆ ಏಕ ಸದಸ್ಯ ೦೨, ದ್ವಿ ಮತ್ತು ಹೆಚ್ಚಿನ ಸದಸ್ಯರಿಗೆ ೦೫ ಕೆ.ಜಿ ಗೋಧಿ ಬಿಡುಗಡೆ ಮಾಡಲಾಗಿದೆ. 
     ಅಂತ್ಯೋದಯ ಪಡಿತರ ಚೀಟಿದಾರರಿಗೆ (ಪಟ್ಟಣ/ಗ್ರಾಮಾಂತರ ಪ್ರದೇಶದವರಿಗೆ)  ೧ ಮತ್ತು ೨ ಸದಸ್ಯರಿಗೆ ೩ ಲೀ. ಸೀಮೆ ಎಣ್ಣೆ, ೩ ಮತ್ತು ಅದಕ್ಕಿಂತ ಮೇಲ್ಪಟ್ಟ ಸದಸ್ಯರಿದ್ದಲ್ಲಿ ಅಂತಹವರಿಗೆ ೦೪ ಲೀಟರ್. ಬಿಪಿಎಲ್ ಕುಟುಂಬಗಳಿಗೆ (ಪಟ್ಟಣ/ಗ್ರಾಮಾಂತರ ಪ್ರದೇಶದವರಿಗೆ)  ೧ ಮತ್ತು ೨ ಜನ ಸದಸ್ಯರಿದ್ದಲ್ಲಿ ೩ ಲೀಟರ್ ಹಾಗೂ ೩ ಮತ್ತು ಮೇಲ್ಪಟ್ಟ ಸದಸ್ಯರಿದ್ದಲ್ಲಿ ೦೪ ಲೀ. ಸೀಮೆಎಣ್ಣೆ ಹಂಚಿಕೆ ಮಾಡಲಾಗಿದೆ. ಗ್ರಾಮಾಂತರ ಪ್ರದೇಶದ ಎಪಿಎಲ್ ಪಡಿತರದಾರರಿಗೆ ೦೨ ಲೀ. ಸೀಮೆಎಣ್ಣೆ ಬಿಡುಗಡೆ ಮಾಡಲಾಗಿದೆ. ಸೀಮೆಎಣ್ಣೆ ಪ್ರತಿ ಲೀಟರ್‌ಗೆ ರೂ.೧೮ ರಂತೆ ದರ ನಿಗದಿಪಡಿಸಲಾಗಿದೆ.
     ಕೊಪ್ಪಳ ತಾಲೂಕಿನಲ್ಲಿ ೧೫೫ ಧೋತಿಗಳು ಮತ್ತು ೭೮೬ ಲುಂಗಿಗಳು, ಗಂಗಾವತಿ ತಾಲೂಕಿನಲ್ಲಿ ೫೬೮ ಲುಂಗಿಗಳು ಹಾಗೂ ಕುಷ್ಟಗಿ ತಾಲೂಕಿನಲ್ಲಿ ೧೫೦ ಧೋತಿಗಳು ಮತ್ತು ೮೬೫ ಲುಂಗಿಗಳು, ಯಲಬುರ್ಗಾ ತಾಲೂಕಿನಲ್ಲಿ ೧೫೦ ಧೋತಿಗಳು ಮತ್ತು ೪೦೦ ಲುಂಗಿಗಳಿದ್ದು, ಅವುಗಳನ್ನು ಮೊದಲು ಬಂದವರಿಗೆ ಆದ್ಯತೆಯ ಮೇರೆಗೆ ಬಿಡುಗಡೆ ಮಾಡಲಾಗುವುದು. ಪಡಿತರ ಚೀಟಿದಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿಸಿದೆ.
ಐಟಿಐ ಸೀಟುಗಳ ಹರಾಜು ಪ್ರಕ್ರಿಯೆ ಅರ್ಜಿ ಆಹ್ವಾನ.
ಕೊಪ್ಪಳ, ಆ.೦೪  ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಂಗಳೂರು ಗ್ರಾಮದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಐ.ಎಮ್.ಸಿ ಯೋಜನೆಯಡಿಯಲ್ಲಿ ಉಳಿದಿರುವ ಜೋಡಣೆಗಾರ ಮತ್ತು ವಿದ್ಯುತ್‌ಶಿಲ್ಪಿ ವೃತ್ತಿ ವಿಭಾಗದ ಸೀಟುಗಳನ್ನು ಹರಾಜು ಪ್ರಕ್ರಿಯೆ ಮೂಲಕ ಭರ್ತಿ ಮಾಡಲಾಗುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಐ.ಎಮ್.ಸಿ ಯೋಜನೆಯಡಿ ಸಂಸ್ಥೆಯಲ್ಲಿ ಈ ಹಿಂದೆ ಜು.೩೦ ರಂದು ಬಾಕಿ ಉಳಿದ ಸೀಟುಗಳಿಗೆ ಹರಾಜಿನ ಮೂಲಕ  ತರಬೇತಾರ್ಥಿಗಳನ್ನು ಭರ್ತಿಮಾಡಿಕೊಳ್ಳಲಾಗಿದ್ದು, ಭರ್ತಿಯಾಗದೇ ಉಳಿದ ಸೀಟುಗಳಿಗೆ ಈಗ ಮತ್ತೊಮ್ಮೆ ಅರ್ಜಿ ಆಹ್ವಾನಿಸಲಾಗಿದೆ. ಆಗಸ್ಟ್.೦೮ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಹಾಗೂ ಹರಾಜು ಕೈಗೊಳ್ಳುವ ದಿನಾಂಕವಾಗಿದೆ. ೧೦೦ ರೂ ಪ್ರವೇಶ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಖಾಲಿ ಇರುವ ಸೀಟುಗಳಿಗನುಗುಣವಾಗಿ ಪ್ರವೇಶ ಅರ್ಜಿಗಳು ನಿಗದಿತ ಅವಧಿಯೊಳಗಾಗಿ ಬಾರದಿದ್ದಲ್ಲಿ ಹರಾಜು ಕೈಗೊಳ್ಳುವ ದಿನಾಂಕ ಮುಂದೂಡಲಾಗುವುದು. ಹರಾಜಿನಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಹರಾಜಿನ ದಿನದಂದು ಹರಾಜಿನ ಮೊತ್ತದ ಜೊತೆಗೆ ಮೊದಲನೆಯ ವರ್ಷದ ಬೋಧನಾ ಶುಲ್ಕ ೨,೨೦೦ ರೂ. ಗಳನ್ನು ತುಂಬಬೇಕು ಹಾಗೂ ಎರಡನೇಯ ವರ್ಷದ ಬೋಧನಾ ಶುಲ್ಕವನ್ನು ಭರಿಸಬೇಕು. ಹರಾಜು ಪ್ರಕ್ರಿಯೆಯಲ್ಲಿ ಐ.ಎಮ್.ಸಿ ಸೊಸೈಟಿ ನಿರ್ಣಯವೇ ಅಂತಿಮವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಚನ್ನಬಸಪ್ಪ ಬಳ್ಳಾರಿ, ತರಬೇತಿ ಅಧಿಕಾರಿಗಳು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಮಂಗಳೂರು, ತಾ||ಯಲಬುರ್ಗಾ, ಜಿ||ಕೊಪ್ಪಳ, ದೂರವಾಣಿ ಸಂಖ್ಯೆ:೦೮೫೩೪-೨೫೯೨೨೫, ಮೊಬೈಲ್: ೯೭೪೦೩೫೮೨೦೮ ಇವರನ್ನು ಸಂಪರ್ಕಿಸಬಹುದಾಗಿದೆ ತಿಳಿಸಿದೆ.

Advertisement

0 comments:

Post a Comment

 
Top