PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ೧೮ ಸಾಧನೆಗೆ ಪ್ರಯತ್ನಗಳು ಮತ್ತು ಕನಸುಗಳಿರಬೇಕು. ಪ್ರಯತ್ನಗಳನ್ನು ಮುಂದೂಡಿದರೆ ಸಾಧಿಸುವುದು ಸಾಧ್ಯವಾಗುವುದಿಲ್ಲ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಧನೆಗೆ ಅವಿರತ ಶ್ರಮ ಬೇಕು. ದೂರದರ್ಶನ, ತಂತ್ರಜ್ಞಾನ, ಕಂಪ್ಯೂಟರ್‌ಗಳು ಮಕ್ಕಳ ಮನಸ್ಸನ್ನು ಆಕ್ರಮಿಸಿಕೊಂಡಿವೆ. ಅವುಗಳನ್ನು ದಾಟಿ ಯಶಸ್ಸಿಗೆ ವಿದ್ಯಾರ್ಥಿಗಳು ಶ್ರಮಿಸಬೇಕು. ಪ್ರೇರಣೆ ನೀಡುವ ಒಳ್ಳೆಯ ಕಾರ್ಯಕ್ರಮಗಳನ್ನು ಮಾತ್ರ ಮಕ್ಕಳು ವೀಕ್ಷಿಸಬೇಕು. ಓದಿನ ಜೊತೆಗೆ ಆಟೋಟಗಳೂ ವ್ಯಕ್ತಿತ್ವದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಕೊಪ್ಪಳ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ. ಕೆ. ತ್ಯಾಗರಾಜನ್ ಹೇಳಿದರು.
ಅವರಿಂದು ನಗರದ ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರಪತಿ ಮತ್ತು ರಾಜ್ಯಪಾಲರ ಪ್ರಶಸ್ತಿಗಳನ್ನು ಪಡೆದ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮೇಲಿನಂತೆ ಮಾತನಾಡಿದರು. ಲಯನ್ಸ್ ಕ್ಲಬ್ ವತಿಯಿಂದ ಎಸ್.ಪಿ. ಡಾ. ಕೆ. ತ್ಯಾಗರಾಜನ್ ಇವರನ್ನು ಸನ್ಮಾನಿಸಲಾಯಿತು.
ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರಪತಿ ಪ್ರಶಸ್ತಿ ವಿಜೇತರಾದ ವಿವೇಕಾನಂದ ಶಾಲೆಯ ಮಕ್ಕಳಾದ ಮಧು ನಾಗರಾಜ ಹುರಕಡ್ಲಿ ಮತ್ತು ಸಾಯಿಕುಮಾರ ರಮೇಶ ಕಲಾಲ್ ಇವರನ್ನು ಡಾ. ಕೆ. ತ್ಯಾಗರಾಜನ್ ಸನ್ಮಾನಿಸಿದರು. ಜೊತೆಗೆ ಗೈಡ್ಸ್ ವಿಭಾಗದ ರಾಜ್ಯಪಾಲರ ಪ್ರಶಸ್ತಿ ಪಡೆದ ರೇಣುಕಾ, ನಯನಾ, ಸ್ನೇಹಾ ಶೀಲವಂತರ, ಸುಮನ್, ವಿಜಯಲಕ್ಷ್ಮೀ, ರಿತು, ವೈಷ್ಣವಿ ಅವರನ್ನೂ ಸನ್ಮಾನಿಸಲಾಯಿತು. ಚೆಸ್‌ನಲ್ಲಿ ರಾಜ್ಯಮಟ್ಟದವರೆಗೂ ಭಾಗವಹಿಸಿದ್ದ ವಿದ್ಯಾರ್ಥಿ ಪವನ್‌ಗೂ ಪ್ರಶಸ್ತಿ ವಿತರಿಸಲಾಯಿತು. ಶಾಲಾ ಸ್ಕೌಟ್ಸ್ ಶಿಕ್ಷಕ ಬಿ. ಪ್ರಹ್ಲಾದ್, ಗೈಡ್ಸ್ ಶಿಕ್ಷಕಿ ಶಿವಲೀಲಾ ಮತ್ತು ಕೊಪ್ಪಳ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಅಧಿಕಾರಿ ಎಚ್.ಎಂ. ಸಿದ್ಧರಾಮಸ್ವಾಮಿ ಇವರಿಗೂ ಗೌರವ ಸನ್ಮಾನ ಮಾಡಲಾಯಿತು.
    ಸ್ಕೌಟ್ಸ್ ಮತ್ತು ಗೈಡ್ಸ್ ದೇಶ ಭಕ್ತಿಯನ್ನುಂಟು ಮಾಡುವ ಸಂಸ್ಥೆ, ದೇಶಕ್ಕೆ ಇದರ ಕೊಡುಗೆ ಮಹತ್ತರವಾದುದು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಶ್ರೀನಿವಾಸ ಗುಪ್ತಾ ಹೇಳಿದರು. ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಸಾಧನೆ ಬಹಳಷ್ಟಿದೆ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳು ಪೂರಕವಾಗಿವೆ ಎಂದು ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಲಯನ್ ಬಸವರಾಜ ಬಳ್ಳೊಳ್ಳಿ ನುಡಿದರು.
    ವೇದಿಕೆಯ ಮೇಲೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಲಯನ್ ವಿ.ಎಸ್. ಅಗಡಿ, ಉಪಾಧ್ಯಕ್ಷ ಲಯನ್ ಜವಾಹರ್ ಲಾಲ್ ಜೈನ್, ಲಯನ್ ಪ್ರಭು ಹೆಬ್ಬಾಳ, ಲಯನ್ ಶಾಂತಣ್ಣ ಮುದಗಲ್, ಲಯನ್ ಚಂದ್ರಕಾಂತ ತಾಲೆಡಾ, ಲಯನ್ ವೆಂಕಟೇಶ ಶ್ಯಾನ್‌ಬಾಗ್ ಉಪಸ್ಥಿತರಿದ್ದರು.
    ಆರಂಭದಲ್ಲಿ ಶಿಕ್ಷಕ ಸಮೀರ ಜೋಶಿ ಸ್ವಾಗತಿಸಿದರೆ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಪರಿಚಯವನ್ನು ವೀರೇಶ ಕೊಪ್ಪಳ ಮಾಡಿದರು. ಪ್ರಾಸ್ತಾವಿಕವಾಗಿ ಶಾಲಾ ಪ್ರಾಚಾರ್ಯ ಎ. ಧನಂಜಯನ್ ಮಾತನಾಡಿದರು. ಕು. ಚಂದನಾ ಮತ್ತು ಕು. ಸುನಿಧಿ ಪ್ರಾರ್ಥಿಸಿದರೆ, ಕು. ಸಹನಾ ಮಹೇಶ ಮತ್ತು ಕು. ಶ್ವೇತಾ ಪದಕಿ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಮಹೇಶ ಬಳ್ಳಾರಿ ವಂದಿಸಿದರು.

Advertisement

0 comments:

Post a Comment

 
Top