PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಅ. ೦೫ (ಕ ವಾ) ಕೊಪ್ಪಳ ಜಿಲ್ಲೆಯಲ್ಲಿ ಕೆಲವೆಡೆ ತೊಗರಿ ಬೆಳೆಯಲ್ಲಿ ಕಾಯೊಕೊರಕದ ಬಾಧೆ ಹೆಚ್ಚಾಗಿರುವುದು ಕಂಡುಬಂದಿದ್ದು, ಇದರ ನಿರ್ವಹಣೆಗೆ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ರೈತರಿಗೆ ಸಲಹೆಗಳನ್ನು ನೀಡಿದೆ.   
ಕಾಯಿಕೊರಕ ಹುಳು ಬಾಧೆ ಲಕ್ಷಣಗಳು : ಹೆಣ್ಣು ಪತಂಗವು ತೊಗರಿಯ ಮೊಗ್ಗು, ಕುಡಿ, ಹೂವು, ಎಳೆ ಕಾಯಿಗಳ ಮೇಲೆ ಸುಮಾರು ೫೦೦-೧೦೦೦ ಮೊಟ್ಟೆಗಳನ್ನು ಬಿಡಿ ಬಿಡಿಯಾಗಿ ಇಡುತ್ತದೆ. ಮರಿ ಹುಳುಗಳು ಪ್ರಾರಂಭದಲ್ಲಿ ಹಸಿರು ಭಾಗವನ್ನು ಕೊರೆದು ತಿನ್ನುತ್ತಾ ನಂತರ ಹೂವು, ಮೊಗ್ಗು ಮತ್ತು ಕಾಯಿಗಳನ್ನು ಕೊರೆಯುತ್ತವೆ. ಬಲಿತ ಹುಳುಗಳು ದೇಹದ ಅರ್ಧ ಭಾಗವನ್ನು ಕಾಯಿಯೊಳಗೆ ತೂರಿಸಿ ಕಾಯಿ ತಿನ್ನುವುದು ಸಾಮಾನ್ಯ ಮೊಗ್ಗು ಮತ್ತು ಹೂಗಳನ್ನು ಕೊರೆಯುವುದರಿಂದ ಅವು ಉದುರಿ ಕಾಯಿ ಕಟ್ಟುವುದು ಕಡಿಮೆಯಾಗುತ್ತದೆ. ಈ ಕೀಡೆಯು ತೊಗರಿಯಲ್ಲಿ ಶೇ. ೫೦-೭೦ ರಷ್ಟು ಹಾನಿ ಮಾಡುತ್ತದೆ. ಬಾಧಿತ ಕಾಯಿಗಳಲ್ಲಿ ರಂಧ್ರವನ್ನು ಕಾಣಬಹುದು.
ನಿರ್ವಹಣಾ ಕ್ರಮಗಳು :  ತೊಗರಿ ಬಿತ್ತುವಾಗ ಎಕರೆಗೆ ೧೦೦ ಗ್ರಾಂ ನಷ್ಟು ಜೋಳ ಅಥವಾ ಪುಂಡಿ ಬೀಜಗಳನ್ನು ಬಿತ್ತುವುದರಿಂದ ಪಕ್ಷಿಗಳಿಗೆ ಕೀಡೆಗಳನ್ನು ಹೆಕ್ಕಿ ತಿನ್ನಲು ಸಹಕಾರಿಯಾಗುತ್ತವೆ.  ಹಕ್ಕಿಗಳು ಕೀಡೆಗಳನ್ನು ತಿನ್ನಲು ಆಶ್ರಯಕ್ಕೆ ಬೆಳೆಗಿಂತ ಎತ್ತರವಿರುವ ಮರದ ಟೊಂಗೆಗಳನ್ನು ಅಲ್ಲಲ್ಲಿ ನೆಡಬೇಕು.  ಪ್ರತೀ ಎಕರೆಗೆ ೨-೩ ಮೋಹಕ ಬಲೆಗಳನ್ನು ಅಳವಡಿಸಿ, ಲಿಂಗಾಕರ್ಷಕಗಳನ್ನು ೧೫ ದಿನಗಳಿಗೊಮ್ಮೆ ಬದಲಾಯಿಸಬೇಕು. ಮೊದಲನೆಯ ಸಿಂಪರಣೆಯಾಗಿ ೦.೬ ಗ್ರಾಂ ಮಿಥೋಮಿಲ್ ೪೦ ಎಸ್.ಪಿ ಅಥವಾ ೦.೬ ಗ್ರಾಂ ಥೈಯೋಡಿಕಾರ್ಬ್ ೭೫ ಡಬ್ಲ್ಯೂ ಪಿ ಅಥವಾ ೨ ಮಿ.ಲೀ ಪ್ರೋಫೆನೋಫಾಸ್ ೫೦ ಇ.ಸಿ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.  ಎರಡನೆ ಸಿಂಪರಣೆಯಾಗಿ ಶೇ.೫ರ ಬೇವಿನ ಕಷಾಯವನ್ನು ಸಿಂಪಡಿಸಬೇಕು. ಈ ದ್ರಾವಣದ ಜೊತೆಗೆ ೧೦೦ ಗ್ರಾಂ ಸಾಬೂನಿನ ಪುಡಿಯನ್ನು ೩೦೦ ರಿಂದ ೪೦೦ ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.  ೧ ಕೆ.ಜಿ ಬೆಳ್ಳುಳ್ಳಿಯನ್ನು ೧೦೦ ಮಿ.ಲೀ ಸೀಮೆ ಎಣ್ಣೆಯಲ್ಲಿ ನೆನೆಸಿ ಮಿಕ್ಸಿಯಲ್ಲಿ ರುಬ್ಬಿ ಮೂರು ಲೀಟರ್ ದ್ರಾವಣ ತಯಾರಿಸಿ ಎರಡು ದ್ರಾವಣಗಳನ್ನು ನಾಲ್ಕು ನೂರು ಲೀಟರ್ ನೀರಿನಲ್ಲಿ ಬೆರೆಸಿ ಒಂದು ಎಕರೆ ಸಿಂಪರಣೆಗೆ ಉಪಯೋಗಿಸಿ ಅಥವಾ ಪ್ಲೂಬೆಂಡಿಯೊಮೈಡ್ ೪೮೦ ಎಸ್.ಸಿ ೦.೦೭೫ ಮಿ.ಲೀ ಪ್ರತೀ ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.  ಮೂರನೇ ಸಿಂಪರಣೆಯಾಗಿ ಹೆಲಿಕೋವರ್ಪಾ ನಂಜಾಣುವನ್ನು ಎಕರೆಗೆ ೧೦೦ ಎಲ್.ಇ ಯಂತೆ ಅಂದರೆ ಪ್ರತೀ ಲೀಟರ್‌ಗೆ  ೦.೭೫ ಮಿ.ಲೀ ಯಂತೆ ಸೇರಿಸಿ ಸಿಂಪಡಿಸಬೇಕು. ಒಂದು ಎಕರೆಗೆ ಸಿಂಪರಣಾ ದ್ರಾವಣಕ್ಕೆ ೧೦೦ ಗ್ರಾಂ ನೀಲಿ ಪುಡಿ ಮತ್ತು ೫೦ ಗ್ರಾಮ ಬೆಲ್ಲ ಸೇರಿಸಿ ಸಾಧ್ಯವಾದಷ್ಟು ಬೆಳಿಗ್ಗೆ  ಅಥವಾ ಸಾಯಂಕಾಲ ತಂಪಾದ ವತ್ತಿನಲ್ಲಿ ಸಿಂಪರಣೆ ಮಾಡುವುದು ಸೂಕ್ತ ಅಥವಾ ರೈನಾಕ್ಷಿಪೈರ್ ೦.೧೫ ಮಿ.ಲೀ ಪ್ರತೀ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು.  ನಾಲ್ಕನೇ ಸಿಂಪರಣೆಯಾಗಿ ೦.೩ ಮಿ.ಲೀ ಇಂಡಾಕ್ಸಕಾರ್ಬ್ ೧೫ ಎಸ್.ಸಿ ಅಥವಾ ೦.೧ ಮಿ.ಲೀ ಸ್ಪೈನೋಸ್ಯಾದ್, ೨.೫ ಮಿ.ಲೀ ಕ್ಲೋರ್‌ಪೈರಿಫಾಸ್ ೨೦ ಇ.ಸಿ ಅಥವಾ ೨ ಮಿ.ಲೀ ಕ್ವಿನಾಲ್‌ಫಾಸ್ ೨೫ ಇ.ಸಿ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.  ನೀರು ಲಭ್ಯವಿಲ್ಲದ ಕಡೆ ಶೇ.೫ರ ಮೆಲಾಥಿಯಾನ್ ಅಥವಾ ಶೇ ೧.೫ರ ಕ್ವಿನಾಲ್‌ಫಾಸ್ ಪುಡಿಯನ್ನು ಧೂಳೀಕರಿಸಬೇಕು.
     ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಷಯತಜ್ಞರಾದ ರೋಹಿತ್.ಕೆ.ಎ. (೯೮೪೫೧೯೪೩೨೮) ಮತ್ತು ಯುಸುಫ್‌ಅಲಿ ನಿಂಬರಗಿ (೭೮೯೯೬೦೦೧೩೪) ಇವರನ್ನು ಸಂಪರ್ಕಿಸಬೇಕೆಂದು ವಿಸ್ತರಣಾ ಮಂದಾಳು ಡಾ.ಎಂ.ಬಿ. ಪಾಟೀಲ (೯೪೮೦೬೯೬೩೧೯) .

Advertisement

0 comments:

Post a Comment

 
Top