ಜನಗಳಿಗೆ ತೊಂದರೆ ಆದ್ರೆ ಮತ್ತೊಂದು ಅವತಾರದಲ್ಲಿ ಬರ್ತಿನಿ, ಇದು ಕ್ಲೈಮ್ಯಾಕ್ಸ್ನಲ್ಲಿ ದರ್ಶನ್ ಹೇಳುವ ಡೈಲಾಗ್. ಅಂದ್ರೆ ಮುಂದೆಯೂ ಸಹ ಇಂಥ ಮಾಸ್ ಸಿನಿಮಾಗಳನ್ನೇ ಮಾಡ್ತಿನಿ ಎನ್ನುವ ಕಮಿಟ್ಮೆಂಟ್ನ್ನ ದರ್ಶನ್ ಅಭಿಮಾನಿಗಳಿಗೆ ಕೊಟ್ಟಂತೆ. ಐರಾವತನ ಗಾಡಿ ಬಂದ್ರೆ ಗಾಳಿ, ಐರಾವತಾನೇ ಬಂದ್ರೆ ಬಿರುಗಾಳಿ ಎನ್ನುವ ಬರುವ ಎಸಿಪಿ ಐರಾವತ ಪಕ್ಕಾ ಮಾಸ್ ಪೋಲೀಸ್. ಜಾಸ್ತಿ ಮಾತಾಡಲ್ಲ, ಮಾತು ಕೇಳದಿದ್ರೆ ಹೊಡೆಯದೇ ಬಿಡಲ್ಲ. ದರ್ಶನ್ ಅಭಿಮಾನಿಗಳಂತೂ ಸಿನಿಮಾ ಮುಗಿಯುವವರೆಗೆ ಶಿಳ್ಳೆ, ಚಪ್ಪಾಳೆ ಹೊಡೆದದ್ದೇ ಹೊಡೆದದ್ದು. ಸಿನಿಮಾ ಮಾಸ್ ಕಥೆಯಾಧರಿಸಿದ್ದರೂ ಕ್ಲಾಸ್ ಆಗಿ ಬಂದಿದೆ. ಇಂಥ ಸಿನಿಮಾಗಳಿಗೆ ಹೆಸರಾಗಿರುವ ಶಂಕರ್ನಾಗ್ ಅವರನ್ನ ಸಿನಿಮಾ ಆಗಾಗ ನೆನಪಿಸುತ್ತದೆ. ಮಾಸ್ ಸಿನಿಮಾ ಎಂದ ಮಾತ್ರಕ್ಕೆ ಇದು ಕಳ್ಳ-ಪೋಲೀಸ್ರ ಆಟಕ್ಕೆ, ಸೇಡಿನ ಕಥೆಗೆ ಅಷ್ಟೇ ಸೀಮಿತವಾಗಿಲ್ಲ. ಪೋಲೀಸ್ ವ್ಯವಸ್ಥೆ ಹೇಗಿದೆ. ಹೇಗಾಗಬೇಕು ಎಂಬುದರ ಝಲಕ್ ಇಲ್ಲಿದೆ. ರೈತನ ಪ್ರಾಮುಖ್ಯತೆ, ಆತ್ಮಹತ್ಯೆಗೆ ಕಾರಣ, ಸರಕಾರದ ಜಬಾವ್ದಾರಿ ಬಗ್ಗೆ ಒಂಚೂರು ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ. ಜೊತೆಗೆ ಯುವತಿಯರ ಮೇಲಿನ ಅತ್ಯಾಚಾರದ ವಿಷಯವನ್ನ ಸೇರಿಸಲಾಗಿದೆ. ಚಿತ್ರದ ಮೊದಲಾರ್ಧ ಹೀರೋಯಿಸಂಗೆ ಮೀಸಲಾದರೆ, ಉಳಿದರ್ಧದಲ್ಲಿ ಕಥೆ ತೆರೆದುಕೊಳ್ಳುತ್ತದೆ. ಆತನದು ರೈತಾಪಿ ಕುಟುಂಬ. ತಾತ ಸ್ವಾತಂತ್ರ್ಯ ಹೋರಾಟಗಾರ. ಆದರೂ ಹೊಲ ಉಳುವುದೇ ಕಾಯಕ. ತನ್ನೊಂದಿಗೆ ಇತರರು ಚೆನ್ನಾಗಿರಬೇಕು ಎನ್ನುವ ಪರೋಪಕಾರಿ. ಊರ ಜನರ ಸಮಸ್ಯೆಯೊಂದನ್ನು ಬರೆಹರಿಸಲು ಬೆಂಗಳೂರಿಗೆ ಹೋದಾಗ ಪ್ರೀತಿಯ ತಂಗಿಯ ಮೇಲೆ ಅತ್ಯಾಚಾರ, ಈ ಬಗ್ಗೆ ಪೋಲೀಸ್ ಸ್ಟೇಶನ್ಗೆ ಕಂಪ್ಲೆಂಟ್ ಕೊಡೋಕೆ ಹೋದರೆ ಪೋಲೀಸ್ ಅಧಿಕಾರಿಗಳ ತಾತ್ಸಾರ, ನೊಂದ ತಂಗಿಯ ಆತ್ಮಹತ್ಯೆ. ಪೋಲೀಸ್ ಅವ್ಯವಸ್ಥೆಯ ಕಾರಣದಿಂದ ತಂಗಿ, ಗೆಳೆಯನನ್ನ ಕಳೆದುಕೊಂಡ ನಾಯಕ, ಅತ್ಯಾಚಾರ ಮಾಡಿದವರನ್ನ ನೇಣು ಹಾಕಿ, ನಕಲಿ ಎಸಿಪಿಯಾಗಿ ರಾಜಧಾನಿಗೆ ಎಂಟ್ರಿ. ಅಲ್ಲೊಬ್ಬ ವಿಲನ್, ಅವನನ್ನು ಮಟ್ಟ ಹಾಕುವ ಮೂಲಕ ಇತಿಶ್ರೀ. ಸಿಬಿಐ ಶಂಕರ್, ಸಾಂಗ್ಲಿಯಾನ, ಅಯ್ಯ, ಕೆಂಪೇಗೌಡ ಮಾದರಿಯಲ್ಲೇ ಐರಾವತ ಸಾಗಿ ಬಂದಿದ್ದಾನೆ. ೧೦ ನಿಮಿಷಕ್ಕೊಂದು ಜಬರ್ದಸ್ತ್ ಡೈಲಾಗ್, ಅರ್ಧಗಂಟೆಗೊಂದು ಹಾಡು, ಈ ಮಧ್ಯೆ ಎರಡೂ ಮೂರು ಚೇಸಿಂಗ್, ಪುಡಿಪುಡಿಯಾಗುವ ಕಾರುಗಳು, ತೆಲುಗು ಸಿನಿಮಾಗಳನ್ನ ಮೀರಿಸುವ ರಿಚ್ನೆಸ್... ಇನ್ನೇನು ಬೇಕು ಸಿನಿಮಾ ಹಿಡಿಸಲು.. ಆದರೆ ಎಲ್ಲೋ ಮಿಸ್ ಹೊಡಿತಿದಿಯಲ್ಲ ಎನ್ನುವ ಅನುಮಾನವೂ ಆಗಾಗ ಕಾಡ್ತಾನೆ ಇರುತ್ತೆ. ಒಂದು ಗಂಟೇಲಿ ಹೇಳಿ ಮುಗಿಸಬೇಕಾದ್ದನ್ನ ಬರೋಬ್ಬರಿ ೨.೫೨ ಗಂಟೇಲಿ ಹೇಳಿದ್ದಾರಲ್ಲ ಎಂದು ಅನಿಸುತ್ತದೆ. ಪ್ರಕಾಶ್ ರೈ ಪಾತ್ರ ಇರೋದೆ ಸಿನಿಮಾ ಅವಧಿಯನ್ನ ಎಳೆಯೋದಿಕ್ಕೆ ಅನ್ನುವ ಅಂಶ ಎಂಥವರಿಗಾದರೂ ಗೊತ್ತಾಗುತ್ತೆ. ಮೀಡಿಯಾದವರು ಕಾರಾಗೃಹದ ಸೆಲ್ವೊಳಗೆ ಹೋಗಿ ಆರೋಪಿಯ ಬೈಟ್ ತಗೋಳೋದು ಅತಿ, ಅಭಾಸ ಅನಿಸುತ್ತೆ. ನಾಯಕಿ ಊರ್ವಶಿ ಪಾತ್ರಕ್ಕೆ ಗಟ್ಟಿತನವಿಲ್ಲ. ಹಾಡುಗಳನ್ನ ಹೊರತುಪಡಿಸಿದರೆ, ಚಿತ್ರದಲ್ಲಿ ನಾ
-ಚಿತ್ರಪ್ರಿಯ್ ಸಂಭ್ರಮ್.
ಯಕಿ ಇದ್ದಾಳೆ ಎನ್ನುವ ಫೀಲ್ ಇಲ್ಲ. ಅಷ್ಟರಮಟ್ಟಿಗೆ ದರ್ಶನ್ ಸ್ತುತಿ ಚಿತ್ರದಲ್ಲಿದೆ. ದರ್ಶನ್ ಐರಾವತ ಸಿನಿಮಾಕ್ಕಾಗಿ ದೇಹವನ್ನ ದಂಡಿಸಿದ್ದಾರೆ. ಸ್ಲಿಮ್ ಆಗಿದ್ದಾರೆ. ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪ್ರಕಾಶ್ ರೈ ಪಾತ್ರಕ್ಕೆ ಇನ್ನಷ್ಟೂ ಜೋಶ್ ಇದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಸಿತಾರಾ ಇಷ್ಟ ಬೇಗ ಅಜ್ಜಿ ಪಾತ್ರಕ್ಕೆ ಒಪ್ಪಿಕೊಂಡದ್ದು ಅದ್ಭುತ. ಅನಂತನಾಗ್ ಸಹಜವಾಗಿ ಸೂಪರ್ಬ್. ಅವಿನಾಶ್ ಪಾತ್ರದಲ್ಲಿ ಒಳ್ಳೆಯವರೋ, ಕೆಟ್ಟವರೋ ಕ್ಲ್ಯಾರಿಟಿ ಇಲ್ಲ. ಗುರುರಾಜ ಹೊಸಕೋಟೆ, ಬುಲ್ಲೆಟ್ ಪ್ರಕಾಶ್, ಸಾಧುಕೋಕಿಲ ಗಮನ ಸೆಳೆಯುತ್ತಾರೆ. ಸಿಂಧು ಲೋಕನಾಥ್ ಮತ್ತೇ ತಂಗಿ ಪಾತ್ರದಲ್ಲಿ ಕಾಣಿಸಿಕೊಂಡು ಇಷ್ಟವಾಗ್ತಾರೆ. ಉದಯ, ಪೆಟ್ರೋಲ್ ಪ್ರಸನ್ನ, ಮುನಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಹರಿಕೃಷ್ಣ ಸಂಗೀತದಲ್ಲಿ ಎರಡು ಹಾಡುಗಳು ಗುನುಗುವಂತಿವೆ. ರವಿವರ್ಮ, ರಾಮ್-ಲಕ್ಷ್ಮಣ ಸ್ಟಂಟ್ಸ್ ರೋಮಾಂಚನ, ಎ.ಪಿ.ಅರ್ಜುನ್ ಅವರ ಸಂಭಾಷಣೆ, ನಿರ್ದೇಶನ, ಸ್ಕ್ರೀನ್ ಪ್ಲೇ ವರ್ಕೌಟ್ ಆಗಿದೆ. ನಿರ್ಮಾಪಕ ಸಂದೇಶ ನಾಗರಾಜ್ ಲಾಭ ಮಾಡಿಕೊಳ್ಳುವ ಭರವಸೆ ಇದೆ. ಸಣ್ಣ ಬಜೆಟ್ನ ಸಿನಿಮಾಗಳೇ, ಮೂರ್ನಾಲ್ಕು ವಾರ ಸೈಲೆಂಟಾಗಿ ಸೈಡಲ್ ಇದ್ಬಿಡಿ. ಯಾಕೆಂದ್ರೆ, ಐರಾವತನ ಆರ್ಭಟ ಶುರುವಾಗಿದೆ. ಬಿರುಗಾಳಿ ಮರೆಯಾದ ಮೇಲೆ ಮತ್ತೇ ನಿಮ್ದೆ ಹವಾ... ಅಲ್ವಾ..?-ಚಿತ್ರಪ್ರಿಯ್ ಸಂಭ್ರಮ್.
0 comments:
Post a Comment
Click to see the code!
To insert emoticon you must added at least one space before the code.