PLEASE LOGIN TO KANNADANET.COM FOR REGULAR NEWS-UPDATES


 ರೈತರು ಬ್ಯಾಂಕುಗಳಿಂದ ಪಡೆದ ಸಾಲವನ್ನು ಸ್ವಯಂ ಪ್ರೇರಣೆಯಿಂದಲೇ ಮರುಪಾವತಿಗೆ ಮುಂದಾಗಬೇಕು ಎಂದು ಸಾಲ ವಸೂಲಾತಿ ನ್ಯಾಯಾಧೀಕರಣದ ಅಧ್ಯಕ್ಷ ಸಿ.ಆರ್. ಬೆನಕನಹಳ್ಳಿ ಅವರು ಹೇಳಿದರು.
         ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್, ಸಾಲ ವಸೂಲಾತಿ ನ್ಯಾಯಾಧೀಕರಣ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಆಡಳಿತ ಭವನದ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ’ವ್ಯಾಜ್ಯ ಪೂರ್ವ ಪ್ರಕರಣಗಳ ಬೃಹತ್ ಲೋಕ ಅದಾಲತ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
  ರೈತರು ಬ್ಯಾಂಕುಗಳಿಂದ ಸಾಲ ಪಡೆಯುವುದನ್ನು ಹಕ್ಕು ಎಂಬುದಾಗಿ ಪ್ರತಿಪಾದಿಸಬೇಕು ಎಂದರೆ, ಪಡೆದ ಸಾಲವನ್ನು ಸ್ವಯಂ ಪ್ರೇರಣೆಯಿಂದಲೇ ಮರು ಪಾವತಿ ಮಾಡಲು ಮುಂದಾಗಬೇಕು.  ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ಗಳಿಂದ ಸಾಲ ಪಡೆದಂತಹ ರೈತರಿಗೆ ಬಡ್ಡಿಯಲ್ಲಿ ರಿಯಾಯಿತಿ ನೀಡುವುದರ ಮೂಲಕ ರೈತರೊಂದಿಗೆ ಉತ್ತಮ ಬಾಂಧವ್ಯ ಬೆಸೆಯಲು ಬ್ಯಾಂಕ್ ಮುಂದಾಗಿದ್ದು, ಇದರ ಸದುಪಯೋಗ ಪಡೆದುಕೊಂಡಲ್ಲಿ, ಪುನಃ ಹೊಸ ಸಾಲ ಪಡೆಯಲು ಅನುಕೂಲವಾಗಲಿದೆ.  ಸಂವಿಧಾನದಲ್ಲಿ ಕರ್ತವ್ಯ ಮತ್ತು ಹಕ್ಕುಗಳು ಪ್ರಮುಖ ಸ್ಥಾನ ಪಡೆದಿದ್ದು, ಕರ್ತವ್ಯ ಮತ್ತು ಹಕ್ಕುಗಳ ಪ್ರತಿಪಾದನೆ, ಒಂದಕ್ಕೊಂದು ಪೂರಕವಾದಾಗ ಮಾತ್ರ ದೇಶದ ಆರ್ಥಿಕತೆ ಸುಧಾರಣೆಯಾಗಲು ಸಾಧ್ಯ.  ಕೃಷಿಕರ ಬೆಂಬಲಕ್ಕೆ ಬ್ಯಾಂಕುಗಳು ಸದಾ ಬೆನ್ನೆಲುಬಾಗಿ ನಿಂತಿದ್ದು, ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡೇ, ಸರ್ಕಾರಗಳು ಆರ್ಥಿಕ ನೀತಿಯನ್ನು ರೂಪಿಸುತ್ತವೆ.  ಬ್ಯಾಂಕ್‌ಗಳಿಂದ ಪಡೆದಂತಹ ಸಾಲವನ್ನು ರೈತರು ಸದ್ಬಳಕೆ ಮಾಡಿಕೊಂಡು, ಆರ್ಥಿಕವಾಗಿ ಸಬಲರಾಗಬೇಕೆ ಹೊರತು, ಸಾಲ ಮರುಪಾವತಿಯಿಂದ ತಪ್ಪಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಬಾರದು.  ಇಲ್ಲದಿದ್ದಲ್ಲಿ, ಹಣದ ಸದ್ಬಳಕೆ ಹಾಗೂ ಸ್ವಾಭಿಮಾನದ ಬದುಕಿನ ಕಲ್ಪನೆ ರೈತರಲ್ಲಿ ಮೂಡುವುದು ಕಷ್ಟ ಸಾಧ್ಯ.  ಬ್ಯಾಂಕುಗಳಲ್ಲಿ ರೈತರ ಕೊಡು, ಕೊಳ್ಳುವಿಕೆ ಸಮರ್ಪಕವಾಗಿ ನಡೆದರೆ ಮಾತ್ರ ಬ್ಯಾಂಕುಗಳು ಸಹ ಮುನ್ನಡೆಯಲು ಸಾಧ್ಯ.  ಬ್ಯಾಂಕುಗಳು ರೈತರ ನಿತ್ಯ ಜೀವನದ ಅವಿಭಾಜ್ಯ ಅಂಗವಾಗಬೇಕು.  ಸಾಲ ಪಡೆದು, ಬ್ಯಾಂಕುಗಳಿಂದ ವಿಮುಖರಾಗದೆ, ಬ್ಯಾಂಕ್ ವ್ಯವಹಾರಗಳ ಬಗ್ಗೆ ಸಂಪೂರ್ಣ ಅರಿವು ಹೊಂದಬೇಕು ಎಂದರು.
  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಗತಿ ಕೃಷ್ಣಾ ಬ್ಯಾಂಕಿನ ಅಧ್ಯಕ್ಷ ಎಂ.ಜಿ. ಭಟ್ ಅವರು ಮಾತನಾಡಿ, ಕೇವಲ ೦೫ ಕೋಟಿ ರೂ. ಬಂಡವಾಳದೊಂದಿಗೆ ೧೯೭೬ ರಲ್ಲಿ ಪ್ರಾರಂಭವಾದ ತುಂಗಭದ್ರಾ ಗ್ರಾಮೀಣ ಬ್ಯಾಂಕ್, ಇದೀಗ ಪ್ರಗತಿ ಕೃಷ್ಣಾ ಬ್ಯಾಂಕ್ ಆಗಿ, ೧೭ ಸಾವಿರ ಕೋಟಿ ರೂ. ವ್ಯವಹಾರ ನಡೆಸುತ್ತಿದೆ.  ಕೋಲಾರ ಜಿಲ್ಲೆಯಿಂದ ಬೀದರ್ ಜಿಲ್ಲೆಯವರೆಗೆ ಸುಮಾರು ೧೧ ಜಿಲ್ಲೆಗಳಲ್ಲಿ ೬೨೫ ಶಾಖೆಗಳನ್ನು ಹೊಂದಿದ್ದು, ಈ ಪೈಕಿ ೫೦೦ ಶಾಖೆಗಳು ಗ್ರಾಮೀಣ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿವೆ.  ಬ್ಯಾಂಕ್‌ಗಳ ಮೂಲಕ ೮೦೦೦ ಕೋಟಿ ರೂ. ಸಾಲ ನೀಡಿದ್ದು, ಈ ಪೈಕಿ ಸುಮಾರು ೭೦೦೦ ಕೋಟಿ ರೂ.ಗಳ ಸಾಲವನ್ನು ಕೃಷಿ ಕ್ಷೇತ್ರಕ್ಕೆ ನೀಡಲಾಗಿದೆ.  ಬ್ಯಾಂಕ್‌ಗಳಲ್ಲಿ ೩ ಸಾವಿರ ಸಿಬ್ಬಂದಿಗಳಿದ್ದು, ೧೧ ಲಕ್ಷ ಗ್ರಾಹಕರ ಬ್ಯಾಂಕುಗಳಲ್ಲಿ ಸೇವೆಯನ್ನು ಪಡೆಯುತ್ತಿದ್ದಾರೆ.  ನಮ್ಮ ದೇಶ ಕೃಷಿ ಪ್ರಧಾನ ದೇಶವಾಗಿದ್ದು, ರೈತರೇ ದೇಶದ ಜೀವನಾಡಿಗಳು, ರೈತರ ಬದುಕನ್ನು ಹಸನಾಗಿಸುವಲ್ಲಿ ಗ್ರಾಮೀಣ ಬ್ಯಾಂಕುಗಳು ಶ್ರಮಿಸುತ್ತಿವೆ.  ರೈತರು ಆರ್ಥಿಕವಾಗಿ ಸದೃಢರಾಗಲು ಬ್ಯಾಂಕ್‌ಗಳ ಸಹಕಾರ ಅಗತ್ಯ.  ಹೀಗೆ ರೈತರ ಏಳಿಗೆಗೆ ಸಹಕಾರ ನೀಡುವಲ್ಲಿ ಬ್ಯಾಂಕುಗಳು ಮುಂದಾಗಿದ್ದು, ಸಾಲದ ಬಡ್ಡಿಯಲ್ಲಿ ರಿಯಾಯಿತಿ ನೀಡಲು ಸಿದ್ಧವಾಗಿದೆ.  ಆದರೆ ಅಸಲು ಮೊತ್ತದಲ್ಲಿ ರಿಯಾಯಿತಿ ನೀಡಲು ಸಾಧ್ಯವಿಲ್ಲ.  ಬ್ಯಾಂಕ್‌ಗಳ ಮೂಲಕ ಸುಮಾರು ೨೦ ಸಾವಿರ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ೩೧೦ ಕೋಟಿ ರೂ. ಸಾಲ ನೀಡಲಾಗಿದ್ದು, ಇಂತಹ ಗುಂಪುಗಳ ಸಾಲ ಯಾವುದೇ ಶ್ರಮವಿಲ್ಲದೆ, ಸುಗಮವಾಗಿ ಮರುಪಾವತಿಯಾಗುತ್ತಿದ್ದು, ಸಾಲ ಪಡೆದ ರೈತರಿಗೆ ಇವರು ಮಾದರಿಯಾಗಿದ್ದಾರೆ ಎಂದರು.
  ಕೊಪ್ಪಳ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಶ್ರೀಕಾಂತ ದಾ ಬಬಲಾದಿ ಸಮಾರಂಭದ ಉದ್ಘಾಟನೆ ನೆರವೇರಿಸಿದರು.  ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ್ ಜಿ. ನಿಜಗಣ್ಣವರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ರಾಜ್ಯ ವಕೀಲರ ಪರಿಷತ್ ಮತ್ತು ಲಾ ಅಕಾಡೆಮಿ ಸದಸ್ಯೆ ಸಂಧ್ಯಾ ಬಿ. ಮಾದಿನೂರ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್ ಕಾರ್ಯಕ್ರಮ ಕುರಿತು ಮಾತನಾಡಿದರು.  ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ ಸ್ವಾಗತಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಟಿ.ಡಿ. ಪವಾರ್, ಹಿರಿಯ ಸಿವಿಲ್ ನ್ಯಾಯಾಧೀಶ ದಶರಥ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  ವಕೀಲ ಹನುಮಂತರಾವ್ ನಿರೂಪಿಸಿದರು.  ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ನ ಮುಖ್ಯ ಪ್ರಬಂಧಕ ಬಿ.ಜೆ. ಕುಲಕರ್ಣಿ ವಂದಿಸಿದರು.  

Advertisement

0 comments:

Post a Comment

 
Top