ಗಂಗಾವತಿ ತಾಲೂಕು ಬಸಾಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಜರುಗುತ್ತಿದ್ದ ಎಸ್ಎಸ್ಎಲ್ಸಿ ಕನ್ನಡ ಭಾಷಾ ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಾಮೂಹಿಕವಾಗಿ ಉತ್ತರಗಳನ್ನು ಹೇಳಿಕೊಡುತ್ತಿದ್ದ ಸಹ ಶಿಕ್ಷಕ ನಿಂಗಪ್ಪ ತಟ್ಟಿ ಅವರನ್ನು ಅಮಾನತುಗೊಳಿಸಿ ಡಿಡಿಪಿಐ ಜಿ.ಹೆಚ್. ವೀರಣ್ಣ ಆದೇಶ ಹೊರಡಿಸಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆ ಕುರಿತಂತೆ ಆಹಾರ ಇಲಾಖೆ ಉಪನಿರ್ದೇಶಕ ಜಯಪ್ಪ ನೇತೃತ್ವದ ಜಿಲ್ಲಾ ಜಾಗೃತ ದಳ ಬಸಾಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಅದೇ ಶಾಲೆಯ ಕನ್ನಡ ಭಾಷೆ ಸಹ ಶಿಕ್ಷಕ ನಿಂಗಪ್ಪ ತಟ್ಟಿ ಅವರು, ವಿದ್ಯಾರ್ಥಿಗಳಿಗೆ ಉತ್ತರಗಳನ್ನು ಸಾಮೂಹಿಕವಾಗಿ ಹೇಳಿಕೊಡುತ್ತಿರುವುದನ್ನು ಪತ್ತೆ ಮಾಡಿದೆ. ಅದೇ ಶಾಲೆಯ ಶಿಕ್ಷಕರನ್ನು ಅದೇ ಪರೀಕ್ಷಾ ಕೇಂದ್ರಕ್ಕೆ ಸಿಟಿಂಗ್ ಸ್ಕ್ವಾಡ್ ಎಂಬುದಾಗಿ ನಿಯಮ ಬಾಹಿರವಾಗಿ ನೇಮಿಸಿರುವುದನ್ನೂ ಸಹ ಜಿಲ್ಲಾ ಜಾಗೃತ ದಳ ಪತ್ತೆ ಮಾಡಿದೆ. ಪರೀಕ್ಷಾ ಕೇಂದ್ರದ ಕೊಠಡಿ ಸಂಖ್ಯೆ ೧೧ ಮತ್ತು ೧೨ ರಲ್ಲಿ ಶಿಕ್ಷಕ ನಿಂಗಪ್ಪ ತಟ್ಟಿ ಅವರು ಎಲ್ಲ ಪರೀಕ್ಷಾರ್ಥಿಗಳಿಗೆ ಕನ್ನಡ ಪತ್ರಿಕೆಯ ಉತ್ತರಗಳನ್ನು ಸಾಮೂಹಿಕವಾಗಿ ಹೇಳಿಕೊಡುತ್ತಿದು, ತಂಡಕ್ಕೆ ಕಂಡುಬಂದಿದ್ದು, ಶಿಕ್ಷಕರು ಪರೀಕ್ಷೆಯ ಪಾವಿತ್ರತೆಯನ್ನು ಹಾಳು ಮಾಡಿ, ಕರ್ತವ್ಯಲೋಪ ಎಸಗಿರುವ ಬಗ್ಗೆ ಜಿಲ್ಲಾ ಜಾಗೃತ ದಳ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ವರದಿ ಸಲ್ಲಿಸಿದೆ. ಅಲ್ಲದೆ ಈ ಕುರಿತಂತೆ ಗಂಗಾವತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಹ ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ, ಶಿಕ್ಷಕ ನಿಂಗಪ್ಪ ತಟ್ಟಿ ಅವರನ್ನು ಕರ್ತವ್ಯಲೋಪ ಆರೋಪದ ಮೇಲೆ ಅಮಾನತುಗೊಳಿಸಿ ಡಿಡಿಪಿಐ ಜಿ.ಹೆಚ್. ವೀರಣ್ಣ ಆದೇಶ ಹೊರಡಿಸಿದ್ದಾರೆ. ಶಿಕ್ಷಕರು ಕರ್ನಾಟಕ ನಾಗರೀಕ ಸೇವಾ ನಿಯಮ ೯೮ ರ ಅನ್ವಯ ಜೀವನಾಂಶ ಭತ್ಯೆಗೆ ಅರ್ಹರಿದ್ದು, ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.
0 comments:
Post a Comment
Click to see the code!
To insert emoticon you must added at least one space before the code.