PLEASE LOGIN TO KANNADANET.COM FOR REGULAR NEWS-UPDATES


ವಿಧಾನ ಪರಿಷತ್ತಿನಲ್ಲಿ ಘೋಷಣೆ

ಬೆಂಗಳೂರು, ಮಾ.29: ಕಳೆದ 4-5 ತಿಂಗಳಿನಿಂದ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಮಡೆಸ್ನಾನವೆಂಬ ಅನಿಷ್ಟ ಪದ್ಧತಿಯನ್ನು ಮುಂದಿನ 2 ತಿಂಗಳಲ್ಲಿ ಸಂಪೂರ್ಣ ನಿಷೇಧಿಸುವುದಾಗಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಇಂದು ವಿಧಾನಪರಿಷತ್ತಿನಲ್ಲಿ ಘೋಷಿಸಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ತೋಂಟದಾರ್ಯರ ಪ್ರಶ್ನೆಗೆ ಉತ್ತರ ನೀಡಿದ ಮುಖ್ಯಮಂತ್ರಿ, ರಾಜ್ಯದಲ್ಲಿ ನಡೆಯುತ್ತಿರುವ ಮಡೆ ಸ್ನಾನದಂಥ ಅನಿಷ್ಟ ಪದ್ಧತಿಗಳ ಬಗ್ಗೆ ಮಾಹಿತಿ ತರಿಸಿಕೊಂಡು ಅದನ್ನು ನಿಷೇಧಿಸುವ ಬಗ್ಗೆ ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಈ ಕುರಿತು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಜೊತೆ ಮಾತುಕತೆ ನಡೆಸಲಾಗಿದೆ ಎಂದರು. ಎಲ್ಲೆಲ್ಲಿ ಇಂಥ ಪದ್ಧತಿ ಜಾರಿಯಲ್ಲಿದೆ ಎಂಬುದನ್ನು ತಿಳಿದುಕೊಂಡು ಅಲ್ಲಿ ಧಾರ್ಮಿಕವಾಗಿ ನಡೆದುಕೊಳ್ಳುವವರ ಮನವೊಲಿಸಿ ಇಂಥ ಪದ್ಧತಿಗೆ ಇತಿಶ್ರೀ ಹಾಡಲಾಗುವುದು ಎಂದು ಸದನಕ್ಕೆ ಭರವಸೆ ನೀಡಿದರು.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಸರಕಾರ ಹಿಂಜರಿಯುವುದಿಲ್ಲ. ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಆವರಣದ ಹತ್ತಿರ ಯಾರಾದರೂ ನಿಧನರಾದರೆ ದೇವರಿಗೆ ಪೂಜೆ ನಿಲ್ಲಿಸಿ, ದೇವರ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶ ನೀಡದೆ ನಿರಾಕರಿಸುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ. ಇಂಥ ಆಚರಣೆ ನಿಲ್ಲಿಸಿ ದೂರದೂರದ ಊರುಗಳಿಂದ ಆಗಮಿಸಿದ ಜನರಿಗೆ ತೊಂದರೆ ಆಗದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

Advertisement

0 comments:

Post a Comment

 
Top